ನಗರದ ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏಪ್ರಿಲ್ 5, 6ರಂದು ಪ್ರತಿಷ್ಠಿತ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಫ್ಯುರೋರ್’ ನಡೆಯಲಿದೆ.
ಲಲಿತ ಕಲೆ, ಸಂಗೀತ, ನೃತ್ಯ, ನಾಟಕ, ಸಾಹಿತ್ಯ, ಛಾಯಾಗ್ರಹಣ, ಫ್ಯಾಷನ್ ಷೋ ಸೇರಿ 5–6 ವಿಭಾಗಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿವೆ. ಈ ಸ್ಪರ್ಧೆಯಲ್ಲಿ ಬೆಂಗಳೂರು ನಗರ ಹಾಗೂ ರಾಜ್ಯದ ಇತರ ಭಾಗಗಳ 60 ಕಾಲೇಜುಗಳಿಂದ 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು ಸಾಹಿತ್ಯ ತಂಡದ ಮುಖ್ಯಸ್ಥೆ ಪಲ್ಲವಿ ಆರ್. ಭಟ್.
ಏಪ್ರಿಲ್ 5ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ಶಿವರಾಜ್ಕುಮಾರ್, ಕೆ.ಪಿ. ಶ್ರೀಕಾಂತ್, ನಟಿ ಭಾವನಾ ಮೆನನ್, ಮಾನ್ವಿತಾ ಹರೀಶ್, ನಟ ರಿಷಿ, ನಿರೂಪಕ ನಿರಂಜನ್ ದೇಶಪಾಂಡೆ, ಶೀತಲ್ ಶೆಟ್ಟಿ ಭಾಗವಹಿಸಲಿದ್ದಾರೆ.ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನ ಕಾರ್ಯದರ್ಶಿ ಗಾಳಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಾಂಶುಪಾಲರಾದ ಸಿ.ಪಿ.ಎಸ್ ಪ್ರಕಾಶ್, ಎಕ್ಸಿಕ್ಯೂಟಿವ್ ಉಪಾಧ್ಯಕ್ಷ ಆರ್. ಜನಾರ್ದನ ಭಾಗವಹಿಸಲಿದ್ದಾರೆ. ಏಪ್ರಿಲ್ 6ರಂದು ಭಾರತ ಅಂಧರ ಕ್ರಿಕೆಟ್ ತಂಡದ ಸದಸ್ಯರು ಭಾಗವಹಿಸಲಿದ್ದಾರೆ. ವಿಶ್ವಸಂಸ್ಥೆ ಕಲಾಪಗಳ ಅಣಕು ಪ್ರದರ್ಶನ ಸ್ಪರ್ಧೆಯ ವಿಶೇಷತೆಗಳಲ್ಲೊಂದು. ಬೇರೆ ಬೇರೆ ಕಾಲೇಜಿನಿಂದ ಪ್ರತಿನಿಧಿಸುವ ಸ್ಪರ್ಧಿಗಳು ವಿಶ್ವಸಂಸ್ಥೆಯ ಕಲಾಪ ನಡೆಯುವಂತೆ ಒಂದೊಂದು ರಾಷ್ಟ್ರವನ್ನು ಪ್ರತಿನಿಧಿಸಿ ಚರ್ಚೆ ನಡೆಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.