ಹಾವು ಮನುಷ್ಯ ರೂಪ ತಾಳಿ ಸೇಡು ತೀರಿಸಿಕೊಳ್ಳುವ ಕಥಾ ಹಂದರವುಳ್ಳ ಧಾರಾವಾಹಿಗಳು ವಾಹಿನಿಗಳಲ್ಲಿ ಹೆಚ್ಚುತ್ತಲೇ ಇವೆ. ಅದಕ್ಕೆ ಮತ್ತೊಂದು ಸೇರ್ಪಡೆ ‘ಕಲರ್ಸ್ ಸೂಪರ್’ ವಾಹಿನಿಯಲ್ಲಿ ಮೂಡಿಬರಲಿರುವ ‘ನಾಗಕನ್ನಿಕೆ’.
ಧಾರಾವಾಹಿಗೆ ‘ಪ್ರೀತಿ, ಪ್ರತೀಕಾರದ ಕಥೆ’ ಎಂಬ ಒಕ್ಕಣೆ ಇದೆ. ಇದುವರೆಗೂ ಪ್ರಸಾರವಾಗಿರುವ ಹಾವುಗಳಿಗೆ ಸಂಬಂಧಿಸಿದ ಕತೆಗಳಿಗಿಂತ ಇದು ಸಂಪೂರ್ಣ ಭಿನ್ನ ಎಂದೂ ವಾಹಿನಿ ಹೇಳಿಕೊಂಡಿದೆ. ಇಷ್ಟಾದರೂ ನಾಗಕನ್ನಿಕೆ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ ಯಾರು ಎಂಬುದು ರಹಸ್ಯವಾಗಿಯೇ ಇತ್ತು. ಆದರೆ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಕನ್ನಡದ ‘ಧೈರ್ಯಂ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಅದಿತಿ ಪ್ರಭುದೇವ್ ಅವರೇ ‘ನಾಗಕನ್ನಿಕೆ’ಯಾಗಿದ್ದಾರೆ ಎಂಬುದು ಈಗ ಗೊತ್ತಾಗಿದೆ.
ದಾವಣಗೆರೆ ಮೂಲದ ಈ ಚೆಲುವೆ, ಅಲ್ಲಿನ ಬಾಪೂಜಿ ತಾಂತ್ರಿಕ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದು, ಎಂಬಿಎ ಪದವೀಧರೆಯೂ ಹೌದು. ‘ನಾಗಕನ್ನಿಕೆ’ಯ ಚಿತ್ರೀಕರಣ ವಿವಿಧ ಪ್ರದೇಶಗಳಲ್ಲಿ ನಡೆದಿದ್ದು ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಪ್ರೀತಿ ಮತ್ತು ಸೇಡು ಧಾರಾವಾಹಿಯ ಕಥಾವಸ್ತು. ಅಂದ ಹಾಗೆ, ಜೂನ್ 26ರಿಂದ (ಸೋಮವಾರ) ರಾತ್ರಿ 7.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.