ಉತ್ತರಾಖಂಡದ ವಿಪ್ಲವಕಾರಿ ಪ್ರವಾಹ ಈಗ ಆಗಿಹೋದ ಮಾತು. ಆದರೆ, ಅದರಿಂದಾದ ಪರಿಣಾಮ ಮಾತ್ರ ಘೋರವಾದುದು. ಆ ರಾಜ್ಯದಲ್ಲಿ ತಣ್ಣಗೆ ಮೌನವಾಗಿ ಹರಿಯುತ್ತಿದ್ದ ನದಿಗಳಲ್ಲಿ ಉಕ್ಕಿಹರಿದ ನೀರು ಮತ್ತು ಹಿಮ ಹೊದ್ದು ನಿಂತಿದ್ದ ಪರ್ವತಗಳ ಕುಸಿತದಿಂದ ಸಂಭವಿಸಿದ ಸಾವು-ನೋವುಗಳಿಗೆ ಲೆಕ್ಕವುಂಟೆ? `ಪ್ರಕೃತಿ ಮುನಿದರೆ ಎದುರಿಲ್ಲ' ಎಂಬ ಮಾತಿಗೆ ದೇಶವೇ ಮೂಕಸಾಕ್ಷಿಯಾದ ಘಟನೆ ಅದು.
ಉತ್ತರಾಖಂಡದ ದುರಂತಕ್ಕೆ ಕನ್ನಡ ಸಾಂಸ್ಕೃತಿಕ ಲೋಕ ಭಾನುವಾರ ಸ್ಪಂದಿಸಿದ ರೀತಿ ಹೃದಯ ತಟ್ಟುವಂತಿತ್ತು. ಮಕ್ಕಳ ಚಿತ್ರ, ಕವಿಗಳ ಕವನ, ಚಿಂತಕರ ಉಪನ್ಯಾಸ, ಕಲಾವಿದರ ಹಾಡು, ನೃತ್ಯಗಾರರ ಹೆಜ್ಜೆ ಪ್ರತಿಯೊಂದರಲ್ಲೂ ಹಿಮಾಲಯದಲ್ಲಿ ಸಂಭವಿಸಿದ ಜಲ ಮಾರಣ ಹೋಮದ ಕನವರಿಕೆ ಇತ್ತು. ಸಾಹಿತಿ ಮತ್ತು ಕಲಾವಿದರ ವೇದಿಕೆ ಆಯೋಜಿಸಿದ್ದ ಈ ಅಪರೂಪದ ಕಾರ್ಯಕ್ರಮದ ಸೂತ್ರದಾರ ಶ್ರೀನಿವಾಸ ಜಿ. ಕಪ್ಪಣ್ಣ. ಮಕ್ಕಳಿಂದ ವೃದ್ಧರವರೆಗೆ ಎಲ್ಲ ಪ್ರಕಾರದ ಕಲಾವಿದರನ್ನು ಕಲೆಹಾಕಿ ಕಪ್ಪಣ್ಣ ರೂಪಿಸಿದ್ದ ಈ ಕಾರ್ಯಕ್ರಮ ನೆರೆದಿದ್ದ ಸಭಿಕರಲ್ಲಿ ಪ್ರಕೃತಿ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವಲ್ಲೂ ಯಶಸ್ವಿಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.