ADVERTISEMENT

ರಂಗರೂಪಕ್ಕೆ ವೈದ್ಯ, ವಸುಧೇಂದ್ರರ ಸಣ್ಣಕತೆಗಳು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST
‘ಸ್ಟೇನ್್ಲೆಸ್ ಸ್ಟೀಲ್ ಪಾತ್ರೆ’, ‘ಶ್ರದ್ಧ’ ನಾಟಕದ ದೃಶ್ಯ
‘ಸ್ಟೇನ್್ಲೆಸ್ ಸ್ಟೀಲ್ ಪಾತ್ರೆ’, ‘ಶ್ರದ್ಧ’ ನಾಟಕದ ದೃಶ್ಯ   

ನಾನು ನನ್ನದು ಎನ್ನುವ ನಾಗಾಲೋಟದಲ್ಲಿ ತನ್ನತನವನ್ನೇ ಕಳೆದುಕೊಂಡಿರುವ ಮನುಷ್ಯ ತಾ ನಡೆದ ಹಾದಿಯನ್ನೇ ಮರೆತಿದ್ದಾನೆ. ಅಭಿವೃದ್ಧಿ ಹೆಸರಿನಲ್ಲಿ ನನ್ನವರೆಂಬ ಸುಂದರ ಬಂಧನದಿಂದ ದೂರ ಹೋಗುತ್ತಿದ್ದಾನೆ, ಆಸೆಯೆಂಬ ಬಿಸಿಲು ಕುದುರೆಯ ಬೆನ್ನಟ್ಟಿ ತಾನು ಮಾಡುತ್ತಿರುವ ತಪ್ಪನ್ನೂ ಒಪ್ಪಿಕೊಳ್ಳದ ಸ್ಥಿತಿ ತಲುಪಿದ್ದಾನೆ. ಇಂತಹ ಹಲವು ಸನ್ನಿವೇಶಗಳನ್ನು ಬಿಂಬಿಸುವ ಎರಡು ಸಣ್ಣಕತೆಗಳನ್ನು ಆಧರಿಸಿದ ನಾಟಕ ನಗರದಲ್ಲಿ ಪ್ರದರ್ಶಿತವಾಗಲಿದೆ.

ವಟಿ ಕುಟೀರ ಸಂಸ್ಥೆಯು ಈ ನಾಟಕದ ಪ್ರದರ್ಶನ ಹಮ್ಮಿಕೊಂಡಿದೆ. ಶ್ರೀನಿವಾಸ ವೈದ್ಯ ಹಾಗೂ ವಸುಧೇಂದ್ರ ಅವರ ಸಣ್ಣಕಥೆಗಳನ್ನು ಆಧರಿಸಿದ ರಂಗಪ್ರಯೋಗ ಇದಾಗಿದೆ. ವಸುಧೇಂದ್ರ ಅವರ ‘ಸ್ಟೇನ್್ಲೆಸ್ ಸ್ಟೀಲ್ ಪಾತ್ರೆ’ ಹಾಗೂ ಶ್ರೀನಿವಾಸ್ ವೈದ್ಯರ ‘ಶ್ರದ್ಧ’ ಕತೆಗಳನ್ನು ಆಧರಿಸಿದ ನಾಟಕ ಇದು. ಸೆಪ್ಟೆಂಬರ್ ೧೧ ಮತ್ತು ೧೨ರಂದು ಇದು ಪ್ರದರ್ಶಿತವಾಗಲಿದೆ.

ಆಧುನಿಕತೆಯ ಭರದಲ್ಲಿ ತಂದೆ, ತಾಯಿಯನ್ನು ಮೂಲೆಗುಂಪಾಗಿಸಿ ರಜಾ ಸಿಕ್ಕಾಗ ದೇವರನ್ನು ಹುಡುಕುತ್ತ ಊರೂರು ತಿರುಗುವ ಕತೆಯನ್ನು ‘ಶ್ರದ್ಧ’ ಬಿಂಬಿಸಿದರೆ, ‘ಸ್ಟೇನ್‌ಲೆಸ್‌ ಸ್ಟೀಲ್‌ ಪಾತ್ರೆ’ ಕತೆಯು ಮಡದಿಯಾಗಿ ಹೊಸ ಮನೆ ಸೇರುವ ಹೆಣ್ಣು, ಆ ಮನೆಯ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾಳೆ ಎನ್ನುವುದನ್ನು ಬಿಂಬಿಸುತ್ತದೆ. ಫಳಫಳ ಹೊಳೆಯುವ ಪಾತ್ರೆಗಳಲ್ಲಿ ತನ್ನ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಅಮ್ಮನ ಕತೆಯೂ ಇದಾಗಿದೆ.

ನಾಟಕದಲ್ಲಿ ಗಣೇಶ್ ಶೆಣೈ, ಪ್ರಾಚಿ ದೇಶಪಾಂಡೆ, ಕೀರ್ತಿಭಾನು, ಹರೀಶ್ ಸೋಮಿಯಾಜಿ, ಕಿರಣ್ ವಟಿ ಇದ್ದು, ನಿರ್ದೇಶನ ಕಿರಣ್ ವಟಿ ಅವರದ್ದು. ನಾಟಕ ಪ್ರದರ್ಶನ ಸಂಜೆ 7.30ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.