ADVERTISEMENT

ರೂಪಕದಲ್ಲಿ ಧರ್ಮಸಾರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2012, 19:30 IST
Last Updated 26 ಜುಲೈ 2012, 19:30 IST
ರೂಪಕದಲ್ಲಿ ಧರ್ಮಸಾರ
ರೂಪಕದಲ್ಲಿ ಧರ್ಮಸಾರ   

ಸದ್ಗುರು ಸಾಯಿ ವಿದ್ಯಾ ಸಂಸ್ಥೆಯು ನಗರದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ `ಜೀವನ ಧರ್ಮ~ ಹೆಸರಿನ ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷವಾಗಿ ಮೂಡಿಬಂತು. ಶಾಲಾ ಕಾಲೇಜಿನ ಸುಮಾರು 125 ವಿದ್ಯಾರ್ಥಿಗಳು ಮಾನವ ಜೀವನ ಧರ್ಮವನ್ನು ಅನಾವರಣಗೊಳಿಸುವಂಥ ವಿವಿಧ ನೃತ್ಯ ರೂಪಕಗಳ ಅಭಿನಯದ ಮೂಲಕ ಪ್ರೇಕ್ಷಕರಲ್ಲಿ ರಸಾನುಭವ ಮೂಡಿಸಿದರು.

ಜೀವನ ಧರ್ಮ- ಒಂದು ಹೊಸಬಗೆಯ ಪರಿಕಲ್ಪನೆ. ಸತ್ಯ, ಧರ್ಮ, ತ್ಯಾಗ, ಬಲಿದಾನ, ಅಹಿಂಸೆ, ಭಕ್ತಿ, ಪ್ರೀತಿ, ವಾತ್ಸಲ್ಯ, ರಾಷ್ಟ್ರಪ್ರೇಮ ಮುಂತಾದ ಜೀವನದ ಮೌಲ್ಯಗಳನ್ನು ಸಾಕ್ಷಾತ್ಕರಿಸಿ ಕೊಟ್ಟ ಪುಟ್ಟ ಪುಟ್ಟ ದೃಶ್ಯ-ಪ್ರಕರಣಗಳು ರಂಗದ ಮೇಲೆ ತೆರೆದುಕೊಳ್ಳುತ್ತಾ ಸಾಗಿದ್ದು ಆಕರ್ಷಕವಾಗಿತ್ತು. ಭಗವದ್ಗೀತೆ ಸಾರುವ ಜೀವನ ಸಂದೇಶ, ನಚಿಕೇತ ಜ್ಞಾನ ಪಿಪಾಸೆ, ಚಾಣಕ್ಯನ ರಾಷ್ಟ್ರಪ್ರೇಮ, ಪುಣ್ಯಕೋಟಿಯ ಸತ್ಯಸಂಧತೆ, ನೈಟಿಂಗೇಲಳ ನಿಸ್ವಾರ್ಥ ಸೇವಾ ಮನೋಭಾವ, ಅಬ್ರಾಹಾಂ ಲಿಂಕನ್ನರ ಮಾನವೀಯತೆ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಾನವ ಜನಾಂಗದ ಉದ್ಧಾರದ ಕನಸುಗಳು- ಹೀಗೆ ಹತ್ತು ಹಲವಾರು ಆದರ್ಶ ಜೀವನ ಚಿತ್ರಗಳು ಮಕ್ಕಳಿಗೆ ಜೀವನ ಸಾರವನ್ನು ಪರಿಚಯ ಮಾಡಿಕೊಡುವಲ್ಲಿ ಸಹಕಾರಿಯಾಯಿತು. ಸುಮಾರು ಒಂದೂವರೆ ಗಂಟೆ ಅವಧಿಯ ಈ ಸಂಗೀತ, ನೃತ್ಯ, ಅಭಿನಯಗಳಿಂದ ಕೂಡಿದ ದೃಶ್ಯಚಿತ್ರ ನಿಜಕ್ಕೂ ಅಮೋಘವಾಗಿತ್ತು.

ಜೀವನ ಧರ್ಮದ ಅರ್ಥಪೂರ್ಣ ಮಾತುಗಳನ್ನು ಎರಕಹೊಯ್ಯುವ ನಾಟಕ ರಚನೆ, ಸಂಭಾಷಣೆಕಾರ ಎಸ್.ವಿ. ಕೃಷ್ಣ ಶರ್ಮರ ಕಸುಬುಗಾರಿಕೆಗೆ ಹಿಡಿದ ಕೈಗನ್ನಡಿಯಾಗಿತ್ತು. ಸರಳ, ಸುಂದರ ಸಂಭಾಷಣೆ, ಸನ್ನಿವೇಶ ಜೋಡಣೆ ಉತ್ತಮವಾಗಿತ್ತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.