ನಗರದ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಸೈನ್ಸಸ್ (ಎಐಇಎಂಎಸ್) ಮುಂಬೈಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಟಿ) ಸಹಯೋಗದಲ್ಲಿ ರೋಬೋಟಿಕ್ಸ್ ಕುರಿತ ಎರಡು ದಿನಗಳ ವಿಶಿಷ್ಟ ಕಾರ್ಯಾಗಾರ ಆಯೋಜಿಸಿತ್ತು.
‘ಇ-ಯಂತ್ರ’ ಯೋಜನೆಯಡಿ ಐಐಟಿ ನಿರ್ಮಿಸಿದ ಮುಕ್ತ ತಂತ್ರಾಂಶದ ‘ಫೈರ್ ಬರ್ಡ್’ ರೋಬೋ ಆಧರಿಸಿ ವಿವಿಧ ಕಾರ್ಯ ನಿರ್ವಹಿಸುವ ರೋಬೋಗಳನ್ನು ಪುನರ್ ನಿರ್ಮಿಸಲು ಆಸಕ್ತ 30 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.
ಹೊಸ ರೋಬೋ ನಿರ್ಮಾಣದ ಮೂಲ ಪ್ರೋಗ್ರಾಮಿಂಗ್ ‘ಫೈರ್ ಬರ್ಡ್’ನಲ್ಲಿ ಲಭ್ಯ. ಇದನ್ನೇ ಬಳಸಿಕೊಂಡು ತಮ್ಮಿಷ್ಟದ ನಿರ್ದಿಷ್ಟ ರೋಬೋ ನಿರ್ಮಿಸುವ ಬಗೆ ಹೇಗೆ ಎಂಬುದನ್ನು ಈ ರೋಬೋದ ಜನಕ ಮುಂಬೈ ಐಐಟಿ ವಿಜ್ಞಾನಿ ಪ್ರೊ. ಕವಿ ಆರ್ಯ ವಿಡಿಯೊ ಕಾನ್ಫರೆನ್ಸ್ ಮೂಲಕ ವಿವರಿಸಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಮ್ಮದೇ ರೋಬೋ ತಯಾರಿಕೆ ಒಂದು ಕನಸು. ಅವರ ಕನಸು ನನಸಿಗೆ ಈ ಕಾರ್ಯಾಗಾರ ನೀರೆರೆಯಿತು.
ತಂತ್ರಜ್ಞಾನದ ಹೊಸ ಆಯಾಮ ಪರಿಚಯಿಸುವುದು, ಆಸಕ್ತ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಅಭಿವೃದ್ಧಿಯ ವೇದಿಕೆ ಕಲ್ಪಿಸಿಕೊಡುವುದು ಕಾರ್ಯಾಗಾರದ ಮುಖ್ಯ ಉದ್ದೇಶ ಎಂದರು ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ತೇಜಸ್ವಿನಿ ಅನಂತಕುಮಾರ್.
ಅಖಿಲ ಭಾರತ ಪಿಸಿ ಬೋರ್ಡ್ ಉತ್ಪಾದಕರ ಸಂಘದ ಕಾರ್ಯದರ್ಶಿ ಅನಿಲ್ಕುಮಾರ್, ಎಐಇಎಂಎಐ ಪ್ರಾಚಾರ್ಯ ಡಾ.ಕೆ.ಎನ್.ಮೂರ್ತಿ, ಇಸಿಇ ವಿಭಾಗ ಮುಖ್ಯಸ್ಥ ಪ್ರೊ. ರಾಜಗೋಪಾಲ್ ಮತ್ತಿತರರು ಪಾಲ್ಗೊಂಡು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.