ಗಾಂಧಿನಗರದಲ್ಲಿ ಇಬ್ಬನಿ ಬೀಳಿಸಲು ಹೊರಟಿದ್ದಾರೆ ನಿರ್ದೇಶಕ ಮದ್ದೂರು ಶಿವು. ವೃತ್ತಿಯಲ್ಲಿ ಅವರು ಸಿವಿಲ್ ಎಂಜಿನಿಯರ್. ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗುವ ಕನಸು ಹೊತ್ತು ಬಂದ ಅವರು ನೆಲೆಯೂರಿದ್ದು ಸಹಾಯಕ ನಿರ್ದೇಶನದಲ್ಲಿ. ಈಗ ಮೊದಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಸ್ನೇಹ ಮತ್ತು ಪ್ರೀತಿಯ ನಡುವಿನ ಎಳೆಯಿಟ್ಟುಕೊಂಡು ಹೆಣೆದಿರುವ ‘ಹನಿ ಹನಿ ಇಬ್ಬನಿ’ಯ ಮಹತ್ವವನ್ನು ಪ್ರೇಕ್ಷಕರಿಗೆ ತೋರಿಸಲು ಹೊರಟಿದ್ದಾರೆ.
‘ಮೊದಲ ಬಾರಿಗೆ ಚಿತ್ರಕಥೆ ಬರೆದು ನಿರ್ಮಾಣ, ನಿರ್ದೇಶನ ಮಾಡಿದ್ದೇನೆ. ಡಿಸೆಂಬರ್ ವೇಳೆಗೆ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ. ಇದು ಹೊಸಬರ ತಂಡ’ ಎಂದರು.
ಇಂದ್ರಸೇನ ಸಂಗೀತ ಸಂಯೋಜಿಸಿದ್ದು ಚಿತ್ರದಲ್ಲಿ 5 ಹಾಡುಗಳಿವೆ. ‘ಜೀವನದಲ್ಲಿ ಎಷ್ಟೇ ಕಷ್ಟ ಎದುರಾದರೂ ನಗುತ್ತಿರಬೇಕು’ ಎಂದು ಮಾತಿಗಿಳಿದ ರಿಚರ್ಡ್ ಲೂಯಿಸ್, ‘ಬಂದಿರುವುದನ್ನು ಸಂತೋಷದಿಂದ ಅನುಭವಿಸಬೇಕು’ ಎಂದು ಕಿವಿಮಾತು ಹೇಳಿದರು. ‘ಚಿತ್ರದಲ್ಲಿ ಲವರ್ ಬಾಯ್ ಆಗಿ ನಟಿಸಿದ್ದೇನೆ’ ಎಂದರು ನಾಯಕ ಅಜಿತ್ ಜಯರಾಜ್.
ನಾಯಕಿ ನಿರೀಕ್ಷಾ ಆಳ್ವ ಸ್ನೇಹ- ಪ್ರೀತಿ ಮೌಲ್ಯ ಹೇಳುವ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ. ಸಣ್ಣಪಾತ್ರ ಮಾಡಿರುವ ಅರ್ಕರೆ ಗಂಗಾಧರ್ ಅವರು ಚಿತ್ರರಂಗದಲ್ಲಿ ಖಳನಟನಾಗಿ ಬದುಕು ಕಂಡುಕೊಳ್ಳುವ ಉತ್ಸಾಹದಲ್ಲಿದ್ದಾರೆ. ಇದೇ ವೇಳೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.