ಮಲಯಾಳಂನ ಹಿರಿಯ ನಟ ಮಮ್ಮೂಟಿ ಅವರ ಮಗ ದುಲ್ಕರ್ ಸಲ್ಮಾನ್ಗೆ ಬಾಲಿವುಡ್ನಲ್ಲಿ ಶುಕ್ರದೆಸೆ ಶುರುವಾಗಿರುವಂತಿದೆ.
ಸೋನಂ ಕಪೂರ್ ನಿರ್ಮಾಣದ ಚಿತ್ರ ಎಂದೂ ಹೇಳಲಾಗುತ್ತಿರುವ ಹೊಸ ಹಿಂದಿ ಚಿತ್ರವೊಂದರಲ್ಲಿ ದುಲ್ಕರ್ ಸಲ್ಮಾನ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ದುಲ್ಕರ್ಗೆ ಬಾಲಿವುಡ್ನ ಎರಡನೇ ಚಿತ್ರ ಇದಾಗಲಿದೆ. ಈಗಾಗಲೇ ‘ಕಾರ್ವಾನ್’ ಚಿತ್ರದಲ್ಲಿ ನಟಿಸಿರುವ ದುಲ್ಕರ್, ‘ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡುವುದಷ್ಟೇ ನನ್ನ ಗುರಿ. ದೊಡ್ಡ ತಾರಾ ಪಟ್ಟ ನನಗೆ ಬೇಕಾಗಿಲ್ಲ. ಎಲ್ಲರೂ ನೆನಪಿಟ್ಟುಕೊಳ್ಳುವಂತಹ ಪಾತ್ರಗಳನ್ನು ಮಾಡಬೇಕು’ ಎಂದು ಹೇಳಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದರು.
ಹೊಸ ಚಿತ್ರವನ್ನು ಅಭಿಷೇಕ್ ಶರ್ಮಾ ನಿರ್ದೇಶಿಸುವ ನಿರೀಕ್ಷೆ ಇದೆ. ಜಾಹೀರಾತು ಕಂಪೆನಿಯೊಂದರ ಎಕ್ಸಿಕ್ಯೂಟಿವ್ ಆದ ಜೋಯಾ ಸಿಂಗ್ ಸೋಲಂಕಿ ಎಂಬ ರಜಪೂತ ಯುವತಿ ಭಾರತೀಯ ಕ್ರಿಕೆಟ್ ತಂಡವನ್ನು ಭೇಟಿಯಾಗುವುದು, ಮುಂದೆ ಆಕೆ ಕ್ರಿಕೆಟ್ ತಂಡದ ಅದೃಷ್ಟಲಕ್ಷ್ಮಿ ಎಂದೇ ಬಿಂಬಿತವಾಗುವುದು ಚಿತ್ರದ ಪ್ರಮುಖ ವಸ್ತು. 2010ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸನ್ನಿವೇಶಗಳೊಂದಿಗೆ ಚಿತ್ರಕತೆ ಮುಂದುವರಿಯುತ್ತದೆ.
ಬರುವ ಮಾರ್ಚ್ ಇಲ್ಲವೇ ಏಪ್ರಿಲ್ನಲ್ಲಿ ಚಿತ್ರ ಚಿತ್ರೀಕರಣ ಶುರುವಾಗುತ್ತದೆ ಎನ್ನಲಾಗಿದೆ. ಸೋನಂ, ತಮ್ಮ ಚಿತ್ರಗಳ ಪ್ರಚಾರ ಮತ್ತು ಅಂತಿಮ ಹಂತದ ಚಿತ್ರೀಕರಣಗಳನ್ನು ಪೂರ್ಣಗೊಳಿಸಿ ಹೊಸ ಚಿತ್ರದಲ್ಲಿ ತೊಡಗಿಸಿಕೊಳ್ಳಲಿ ಎಂಬ ಕಾರಣಕ್ಕೆ ತಡವಾಗಿ ಚಿತ್ರೀಕರಣ ಆರಂಭಿಸುವ ಲೆಕ್ಕಾಚಾರ ನಿರ್ದೇಶಕರದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.