ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ–2’ ನೌಕೆ ಚಂದ್ರನ ಅಂಗಳದತ್ತ ಪ್ರಯಾಣ ಬೆಳೆಸಿರುವ ಬೆನ್ನಲ್ಲೇ ನಗರದ ಅಕ್ಕಸಾಲಿಗರೊಬ್ಬರು ಚಿನ್ನದಲ್ಲಿ ಮಿನಿ ‘ಚಂದ್ರಯಾನ–2’ ಪ್ರತಿಕೃತಿ ತಯಾರಿಸಿ ಗಮನ ಸೆಳೆದಿದ್ದಾರೆ.
ಇಸ್ರೊ ವಿಜ್ಞಾನಿಗಳ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ತಂದಿಟ್ಟ ಚಂದ್ರಯಾನ –2 ಯಶಸ್ಸಿನ ಸಂಭ್ರಮವನ್ನು ಆಚರಿಸಲು ಶ್ರೀರಾಮಪುರದ ಲಕ್ಷ್ಮಿನಾರಾಯಣ ಪುರದಲ್ಲಿರುವ ಮಂಜುನಾಥ ಜುವೆಲ್ರಿ ವರ್ಕ್ಸ್ ಮಾಲೀಕ ನಾಗರಾಜ್ ರೇವಣಕರ್ ಈ ಮಿನಿ ಉಪಗ್ರಹ ತಯಾರಿಸಿದ್ದಾರೆ.
2 ಗ್ರಾಂ 700 ಮಿಲಿ ಗ್ರಾಂ ಚಿನ್ನದಲ್ಲಿ ತಯಾರಿಸಿರುವ ಉಪಗ್ರಹ ಹೊತ್ತ ಬಾಹುಬಲಿ ರಾಕೆಟ್ ಮೂರು ಸೆಂಟಿ ಮೀಟರ್ ಎತ್ತರವಿದೆ. ಸ್ಟ್ಯಾಂಡ್ ಸೇರಿಸಿದರೆ ಒಟ್ಟು 4.5 ಸೆಂಟಿ ಮೀಟರ್ ಎತ್ತರವಾಗುತ್ತದೆ. 22 ಕ್ಯಾರೆಟ್ ಚಿನ್ನದಲ್ಲಿ ಪುಟ್ಟ ರಾಕೆಟ್ ಮತ್ತು ಉಪಗ್ರಹ ತಯಾರಿಸಲು 30 ಗಂಟೆ ತಗುಲಿದೆ. ತ್ರಿವರ್ಣ ಧ್ವಜದಲ್ಲಿ ಇಂಡಿಯಾ ಮತ್ತು ಇಸ್ರೊ ಹೆಸರು ಬರೆಯಲಾಗಿದೆ.
‘ಚಂದ್ರಯಾನ -2’ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ವಿಜ್ಞಾನಿಗಳ ಅದ್ಭುತ ಸಾಧನೆ.ಇದು ನಮ್ಮದೇಶದ ಹೆಮ್ಮೆ. ಈ ಮಿನಿ ರಾಕೆಟ್ ಮೂಲಕ ವಿಜ್ಞಾನಿಗಳಿಗೆ ಗೌರವ ಸಲ್ಲಿಸಿರುವೆ’ ಎಂದು ನಾಗರಾಜ್ ಹೆಮ್ಮೆ ವ್ಯಕ್ತಪಡಿಸುತ್ತಾರೆ.
ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ಚಿನ್ನದಲ್ಲಿ 0.490 ಮಿಲಿ ಗ್ರಾಂ ತೂಕದ ಮತ್ತು 1.5 ಸೆಂಟಿ ಮೀಟರ್ ಎತ್ತರದ ವಿಶ್ವಕಪ್ ಪ್ರತಿಕೃತಿ ತಯಾರಿಸಿ ಇವರು ಗಮನ ಸೆಳೆದಿದ್ದರು. ಈ ಪುಟ್ಟ ಕಪ್ ಅನ್ನು ಕಿರು ಬೆರಳಲ್ಲಿ ಎತ್ತಿ ಹಿಡಿಯಬಹುದಾಗಿತ್ತು.
ಜುಲೈ 22 ರಂದುಉಡಾವಣೆಯಾದ ಚಂದ್ರಯಾನ–2 ನೌಕೆಯನ್ನು ಇದೇ 20 ರಂದು ಭೂಕಕ್ಷೆಯಿಂದ ಚಂದ್ರನ ಕಕ್ಷೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ.ಸೆಪ್ಟೆಂಬರ್ 7 ರಂದು ನೌಕೆ ಚಂದ್ರನ ಮೇಲ್ಮೈ ತಲುಪಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.