ನೋವು ಅಸಹಾಯಕತೆ: ಮುಖ್ಯಮಂತ್ರಿ ಕಣ್ಣೀರು
ಬೆಂಗಳೂರು, ಸೆ. 15– ದಕ್ಷ ಪ್ರಾಮಾಣಿಕ ಅಧಿಕಾರಿ ಜೆ. ವಾಸುದೇವನ್ ಅವರಿಗೆ ಜೈಲುವಾಸ ಆಗುವುದನ್ನು ತಡೆಯಲು ಮಾಡಿದ ಪ್ರಯತ್ನವೆಲ್ಲವೂ ನಿರರ್ಥಕವಾಗಿ ಅವರು ಕಂಬಿಯ ಹಿಂದೆ ಹೋಗಬೇಕಾಗಿ ಬಂತಲ್ಲಾ ಎನ್ನುವಾಗ ಮುಖ್ಯಮಂತ್ರಿ
ಎಚ್.ಡಿ. ದೇವೇಗೌಡರು ಭಾವೋದ್ರಿಕ್ತರಾಗಿ ಕಣ್ಣೀರಿಟ್ಟ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.
ಇಷ್ಟು ಸಾಲದೆಂಬಂತೆ ‘ಒಬ್ಬ ರೈತನ ಮಗ ಅಧಿಕಾರಕ್ಕೆ ಬಂದಿರುವುದನ್ನು ಸಹಿಸದೆ ನೀವು ಹಾಗೂ ಪತ್ರಿಕೆಯವರು ನನಗೆ ಕಪ್ಪು ಬಣ್ಣ ಬಳಿಯುತ್ತಿದ್ದೀರಿ. ನಾನು ಮಾಡಿರುವ ತಪ್ಪಾದರೂ ಏನು? ನಾನು ಜನತೆಯ ತೀರ್ಪಿನ ಮೇಲೆ ಅಧಿಕಾರಕ್ಕೆ ಬಂದಿದ್ದೇ ತಪ್ಪೇ?’ ಎಂದು ಪ್ರಶ್ನಿಸುತ್ತಾ ಗದ್ಗದಿತರಾಗಿ ಅವರ ಗಂಟಲುಬ್ಬಿ ಬಂತು. ಕಣ್ಣೀರನ್ನು ಒರೆಸಿಕೊಂಡರು.
ಸಚಿವ ಸಿ.ಬೈರೇಗೌಡ ಹಾಗೂ ಆಡಳಿತ ಪಕ್ಷದ ಜಿ.ಬಿ.ಶಿವಕುಮಾರ್ ಅವರು ಮುಖ್ಯಮಂತ್ರಿಯವರ ಸ್ಥಿತಿ ಕಂಡು ನೊಂದು ‘ಮಣ್ಣಿನ ರೈತರ ಮಗ ನೀವು ಕಣ್ಣೀರು ಹಾಕಬಾರದು. ಗಂಡೆದೆಯಿಂದ ಎದುರಿಸಿ ನಿಲ್ಲಬೇಕು’ ಎಂದು ಧೈರ್ಯ ತುಂಬಿದರು.
ಚಂದ್ರಸ್ವಾಮಿ– ದಾವೂದ್ ಸಂಬಂಧ: ಸಾಕ್ಷ್ಯ ಸಂಗ್ರಹಕ್ಕೆ ಕ್ರಮ
ನವದೆಹಲಿ, ಸೆ. 15 (ಯುಎನ್ಐ)– ವಿವಾದಾತ್ಮಕ ಸಾಧು ಚಂದ್ರಸ್ವಾಮಿ ಅವರನ್ನು ಬಂಧಿಸಬೇಕು ಎಂದು ಗೃಹ ಖಾತೆ ರಾಜ್ಯ ಸಚಿವ ರಾಜೇಶ್ ಪೈಲಟ್ ಅವರು ಸಿಬಿಐಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ದಾವೂದ್ ಇಬ್ರಾಹಿಂ ಜತೆ ಅವರಿಗಿರುವ ಸಂಬಂಧದ ಬಗೆಗಿನ ಸಾಕ್ಷ್ಯಾಧಾರಗಳನ್ನು ಸರ್ಕಾರ ಪರಿಶೀಲಿಸತೊಡಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.