ಹಾಲು ಕುಡಿಯುವ ಗಣಪ: ದೇಶದಾದ್ಯಂತ ಕುತೂಹಲ
ನವದೆಹಲಿ, ಸೆ. 21 (ಯುಎನ್ಐ)– ಭಕ್ತರು ನೀಡಿದ ಹಾಲನ್ನು ‘ಗಣೇಶ’ ವಿಗ್ರಹ ಸೇವಿಸುತ್ತಿದೆ ಎಂಬ ಸುದ್ದಿ ಇಂದು ದೇಶದ ಎಲ್ಲೆಡೆ ಹರಡಿ ಜನ ತಂಡೋಪತಂಡವಾಗಿ ಹಾಲಿನ ಬಟ್ಟಲಿನೊಂದಿಗೆ ದೇವಾಲಯಗಳಿಗೆ ಧಾವಿಸಿದರು.
ದೇವರು ಹಾಲು ಸೇವಿಸುವ ಪವಾಡವನ್ನು ಸ್ವತಃ ಕಾಣಲು, ಅನುಭವಿಸಲು ದೇವಾಲಯಗಳ ಎದುರು ಜನ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದರು. ನೂಕುನುಗ್ಗಲಿನಿಂದಾಗಿ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.
ಈ ಸುದ್ದಿಯು ‘ಸಮೂಹ ಉನ್ಮಾದ’ಕ್ಕೆ ಉದಾಹರಣೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಗ್ರಹಕ್ಕೆ ಅಭಿಷೇಕ ಮಾಡಿದ ಹಾಲು ಕಣ್ಣಿಗೆ ಕಾಣಿಸದ ಬಿಳಿಯ ಪೊರೆಯ ರೂಪದಲ್ಲಿ ಕೆಳಗಿಳಿಯುವುದು. ಇದಕ್ಕೆ ಮೇಲ್ಮುಖ ಒತ್ತಡ ಕಡಿಮೆ ಇರುವ ಹಾಲಿನ ಗುಣವೇ ಕಾರಣ ಎಂದು ರಾಷ್ಟ್ರೀಯ ಭೌತಶಾಸ್ತ್ರ ಪ್ರಯೋಗಾಲಯದ ಡಾ. ಹರಿ ಓಂ ಉಪಾಧ್ಯಾಯ ಅವರು ತಿಳಿಸಿದರು.
ಹಿಂದುಳಿದ ವರ್ಗಗಳಿಗೆ ಆಯೋಗ
ಬೆಂಗಳೂರು, ಸೆ. 21– ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳಿಗಾಗಿ ಶಾಶ್ವತ ಆಯೋಗ ರಚಿಸಲು ಅಧಿಕಾರ ನೀಡುವ ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಸೂದೆ’ಗೆ ವಿಧಾನಸಭೆ ಇಂದು ಅಂಗೀಕಾರ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.