ADVERTISEMENT

ಬಂಡೀಪುರದಲ್ಲಿ ಕಾಳ್ಗಿಚ್ಚು: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಫೇಕ್ ಫೋಟೊ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 1:41 IST
Last Updated 26 ಫೆಬ್ರುವರಿ 2019, 1:41 IST
   

ಬೆಂಗಳೂರು: ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಬೆಂಕಿ ಬಿದ್ದು ಸುಮಾರು 2,500 ಹೆಕ್ಟೇರ್ ಸುಟ್ಟು ಹೋಗಿದೆ. ಹಸಿರಿನಿಂದ ಕಂಗೊಳಿಸುತ್ತಿದ್ದ ಹುಲಿ ಸಂರಕ್ಷಿತ ಪ್ರದೇಶವೀಗ ವನ್ಯಜೀವಿಗಳ ಸುಳಿದಾಟವಿಲ್ಲದೆ ಸ್ಮಶಾನದಂತಾಗಿದೆ.ಕಾಳ್ಗಿಚ್ಚಿನಿಂದ ಅಪಾರ ಅರಣ್ಯ ಸಂಪತ್ತು ನಾಶವಾಗಿದ್ದು ಇದರಲ್ಲಿ ಎಷ್ಟು ವನ್ಯಜೀವಿಗಳು ಸಾವಿಗೀಡಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.

ಬಂಡೀಪುರದಲ್ಲಿ ಕಾಳ್ಗಿಚ್ಚಿನಿಂದಾಗಿ ಸಾವಿಗೀಡಾಗಿರುವ ಪ್ರಾಣಿಗಳು ಎಂಬ ಶೀರ್ಷಿಕೆಯಲ್ಲಿ ಒಂದಷ್ಟು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.ಈ ಫೋಟೊಗಳ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ದಿ ನ್ಯೂಸ್ ಮಿನಿಟ್, ಈ ಫೋಟೊಗಳು ಬಂಡೀಪುರದ್ದು ಅಲ್ಲ ಎಂದು ವರದಿ ಮಾಡಿದೆ.

ಸುಟ್ಟು ಕರಕಲಾದ ಹಾವು


ಈ ಫೋಟೊ ವಾಯವ್ಯ ಕೊಲಂಬಿಯಾದ ನೆಕೊಕ್ಲಿ ಪ್ರದೇಶದಲ್ಲಿ ಉಂಟಾದ ಕಾಳ್ಗಿಚ್ಚಿನಲ್ಲಿ ಸುಟ್ಟು ಹೋದ ಹಾವಿನದ್ದಾಗಿದೆ.ಏಪ್ರಿಲ್ 24, 2015ರಂದು ಪ್ರಕಟವಾದ ಈ ಸುದ್ದಿಯಲ್ಲಿ ಈ ಫೋಟೊ ಇದೆ.

ADVERTISEMENT

ಮೊಲದ ಚಿತ್ರ


ಇದು 2018 ನವೆಂಬರ್ 8 ಕ್ಯಾಲಿಫೋರ್ನಿಯಾದ ಮಲಿಬುಲ್ಲಿ ಉಂಟಾದ ಕಾಳ್ಗಿಚ್ಚು (Woolsey Fire) ನದ್ದಾಗಿದೆ.ಈ ಚಿತ್ರವನ್ನು ಜುಮಾ ಪ್ರೆಸ್‍ನ ಕ್ರಿಸ್ ರುಸಾನೊಸ್ಕಿ ಅವರು ನವೆಂಬರ್ 14, 2018ರ ಆಸುಪಾಸು ದಿನಗಳಲ್ಲಿ ಕ್ಲಿಕ್ಕಿಸಿದ್ದಾರೆ.

ಒರಂಗುಟನ್‌


ಈ ಚಿತ್ರ 2016 ಫೆಬ್ರುವರಿಯಲ್ಲಿ ಕ್ಲಿಕ್ಕಿಸಿದ್ದ ಚಿತ್ರವಾಗಿದ್ದು ಸೆಂಟರ್ ಆಫ್ ಒರಂಗುಟವ್ ಪ್ರೊಟೆಕ್ಷನ್ ಈ ಚಿತ್ರವನ್ನು ಮಾರ್ಚ್ 3, 2016ರಂದು ಪ್ರಕಟಿಸಿದೆ ಎಂದು ಎಎಫ್‍ಪಿ ಸುದ್ದಿಸಂಸ್ಥೆ ಹೇಳಿದೆ.

ಇಂಡೊನೇಷ್ಯಾದ ಪೂರ್ವ ಕಳಿಮಂಟನ್ ಪ್ರಾಂತ್ಯದಲ್ಲಿರುವ ಬೊರೆನೊ ದ್ವೀಪದ ಕುಟೈ ರಾಷ್ಟ್ರೀಯ ಉದ್ಯಾನದಲ್ಲಿ ಉಂಟಾದ ಕಾಳ್ಗಿಚ್ಚಿನಲ್ಲಿ ಸುಟ್ಟು ಹೋದ ಒರಂಗುಟನ್ ಚಿತ್ರವಾಗಿದೆ.ಗಮನಿಸಬೇಕಾದ ವಿಷಯ ಎಂದರೆ ಒರಂಗುಟನ್ ಭಾರತದಲ್ಲಿ ಕಾಣ ಸಿಗುವುದಿಲ್ಲ. ಅವುಗಳು ಬೊರೆನಿಯೊ ಮತ್ತು ಸುಮಾತ್ರದಲ್ಲಿ ಕಾಣ ಸಿಗುತ್ತವೆ.

ಮೇಲಿರುವ ಈಚಿತ್ರ ಸ್ಪೇನ್- ಫ್ರಾನ್ಸ್ ಗಡಿ ಭಾಗದ ಸಮೀಪವಿರುವ ಡಾರ್ನಿಯಸ್ ನಲ್ಲಿ ಉಂಟಾದ ಕಾಡ್ಗಿಚ್ಚಿನಲ್ಲಿ ಸತ್ತ ಕಾಡು ಕುರಿಗಳ ಚಿತ್ರವಾಗಿದೆ.ಜುಲೈ 23, 2102ರಂದು ಉಂಟಾದ ಈ ಘಟನೆಯಲ್ಲಿ 17,000 ಎಕರೆ ಅರಣ್ಯ ನಾಶವಾಗಿತ್ತು. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ಎಎಫ್‍ಪಿ ಸುದ್ದಿಸಂಸ್ಥೆಯ ಛಾಯಾಗ್ರಾಹಕ ಲೂಯಿಸ್ ಜೆನೆ.

ಬಂಡೀಪುರ ಕಾಳ್ಗಿಚ್ಚಿನ ಬಗ್ಗೆ ದಿ ನ್ಯೂಸ್ ಮಿನಿಟ್ ಜತೆ ಮಾತನಾಡಿದ ಅರಣ್ಯ ರಕ್ಷಣೆಯ ಪ್ರಧಾನ ಅಧಿಕಾರಿ ಪುನ್ನತಿ ಶ್ರೀಧರ್, ಇಲ್ಲಿವರೆಗೆ ಪ್ರಾಣಿಗಳು ಸತ್ತಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.ನಾವು ನೋಡಿದಂತೆ ಅಲ್ಲಿ ಯಾವುದೇ ಪ್ರಾಣಿಗಳು ಸತ್ತಿಲ್ಲ.ಬೆಂಕಿ ಕಾವು ತಾಗುತ್ತಿದ್ದಂತೆ ಪ್ರಾಣಿಗಳು ಬೇರೆಡೆಗೆ ಹೋಗುತ್ತವೆ.ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.