ADVERTISEMENT

Fact Check: ಆಜಾದ್ ಬೆಂಬಲಿಗರಿಗೆ ಪೊಲೀಸರಿಂದ ತಕ್ಕ ಶಾಸ್ತಿ; ಇದು ಸುಳ್ಳು ಸುದ್ದಿ

ಫ್ಯಾಕ್ಟ್ ಚೆಕ್
Published 16 ಜುಲೈ 2025, 0:30 IST
Last Updated 16 ಜುಲೈ 2025, 0:30 IST
   

ಸಾಮಾಜಿಕ ಜಾಲತಾಣಗಳಲ್ಲಿ ಎರಡು ವಿಡಿಯೊಗಳು ಹರಿದಾಡುತ್ತಿದ್ದು, ಒಂದು ವಿಡಿಯೊದಲ್ಲಿ ಕೆಲವು ವ್ಯಕ್ತಿಗಳು ಹಲ್ಲೆಗೊಳಗಾದವರಂತೆ ಕೈಗಳಿಗೆ ಬ್ಯಾಂಡೇಜ್ ಕಟ್ಟಿಕೊಂಡು, ಕುಂಟುತ್ತಾ ನಡೆಯುವುದು ಕಂಡರೆ, ಮತ್ತೊಂದರಲ್ಲಿ ಕೆಲವರ ತಲೆ ಬೋಳಿಸಿರುವುದು ಕಾಣುತ್ತದೆ. ಅವರು ಉತ್ತರ ಪ್ರದೇಶದ ಆಜಾದ್ ಸಮಾಜವಾದಿ ಪಕ್ಷದ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರ ಬೆಂಬಲಿಗರಾಗಿದ್ದು, ಆಜಾದ್ ಅವರನ್ನು ಇತ್ತೀಚೆಗೆ ಪ್ರಕರಣವೊಂದರ ಸಂಬಂಧ ಪೊಲೀಸರು ಬಂಧಿಸಿದ್ದನ್ನು ವಿರೋಧಿಸಿ ಹಿಂಸಾಚಾರ ನಡೆಸಿದ್ದರು; ಅವರಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದನೆ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊದ ಕೀಫ್ರೇಮ್ ಅನ್ನು ರಿವರ್ಸ್ ಇಮೇಜ್‌ ಸರ್ಚ್‌ಗೆ ಒಳಪಡಿಸಿದಾಗ, ಅದು ಖಬರ್ ಪದಂಪುರ್ ಮತ್ತು ಗ್ರಾಮೀಣ್ ಎನ್ನುವ ಫೇಸ್‌ಬುಕ್ ಪುಟಗಳಿಗೆ ಸಂಪರ್ಕ ಕಲ್ಪಿಸಿತು. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಉದ್ಯಮಿಯಿಂದ ಹಣ ವಸೂಲಿ ಮಾಡುತ್ತಿದ್ದ ಗುಂಪನ್ನು ಬಂಧಿಸಲಾಗಿದೆ ಎಂದು ಅದರಲ್ಲಿ 2025ರ ಜೂನ್ 5ರಂದು ಉಲ್ಲೇಖಿಸಲಾಗಿತ್ತು. ಗೂಗಲ್‌ನಲ್ಲಿ ಹುಡುಕಾಡಿದಾಗ ಇದಕ್ಕೆ ಸಂಬಂಧಿಸಿದ ಒಂದು ಮಾಧ್ಯಮ ವರದಿಯೂ ಸಿಕ್ಕಿತು. ವಸೂಲಿಕೋರರನ್ನು ಪೊಲೀಸರು ಕರೆದೊಯ್ಯುತ್ತಿರುವ ವಿಡಿಯೊ ಅನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ವರದಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.