ಮಹಿಳೆಯನ್ನು ಗುಂಪೊಂದು ಥಳಿಸುತ್ತಿರುವ ವಿಡಿಯೊವನ್ನು ‘ಬಿಜೆಪಿ ಉತ್ತರ ಪ್ರದೇಶ’ ಟ್ವಿಟರ್ ಖಾತೆಯಲ್ಲಿ ಇದೇ 18ರಂದು ಟ್ವೀಟ್ ಮಾಡಲಾಗಿತ್ತು. ಇದು, ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನದಲ್ಲಿ ನಡೆದಿದೆ ಎಂದು ಹೇಳಲಾಗಿತ್ತು. ಈ ಘಟನೆಯ ಕುರಿತು ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಇಬ್ಬರಿಂದಲೂ ಪ್ರತಿಕ್ರಿಯೆ ಕೇಳಲಾಗಿತ್ತು. ಈ ಟ್ವೀಟ್ ಅನ್ನು ಬಿಜೆಪಿಯ ಜಮಶೆಡ್ಪುರ್ ಮಹಾನಗರ, ಆಗ್ರ ಮಹಾನಗರ ಟ್ವಿಟರ್ ಖಾತೆಗಳೂ ಸೇರಿ ಹಲವಾರು ಟ್ವಿಟರ್ ಖಾತೆಗಳು ಹಂಚಿಕೊಂಡಿದ್ದವು.
ಇದು ರಾಜಸ್ಥಾನದ ಘಟನೆಯಲ್ಲ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಉತ್ತರ ಪ್ರದೇಶದ ಅಮೇಠಿಯ ಭಾಗ್ವ ಗ್ರಾಮದಲ್ಲಿ ಈ ಘಟನೆ ನಡೆದಿರುವ ಕುರಿತು ದೈನಿಕ್ ಜಾಗರಣ್ ದಿನ ಪತ್ರಿಕೆಯ ಪತ್ರಕರ್ತರೊಬ್ಬರು 18ರಂದೇ ಟ್ವೀಟ್ ಮಾಡಿದ್ದಾರೆ. ಈ ಪ್ರಕರಣ ಇದೇ 15ರಂದು ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರಿಗಂಜ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಭೂ ಕಲಹದ ಕಾರಣ ತಾಯಿ, ಮಗಳನ್ನು ಥಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.