ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಆರತಿ ಮಾಡಲು ಬರುವುದಿಲ್ಲ ಎಂದು ಬಿಜೆಪಿಯ ಹಲವು ನಾಯಕರು ಟೀಕಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ‘ಚುನಾವಣೆಗಾಗಿ ಹಿಂದೂ ಆದರೆ, ಹೀಗೇ ಆಗುತ್ತದೆ. ಎಡದಿಂದ ಬಲಕ್ಕೆ (ಕ್ಲಾಕ್ವೈಸ್) ಆರತಿ ಮಾಡುವುದು ಸಂಪ್ರದಾಯ. ಭೂಮಿಯೂ ಎಡದಿಂದ ಬಲಕ್ಕೆ ತಿರುಗುತ್ತದೆ. ಆದರೆ ರಾಹುಲ್ ಗಾಂಧಿ ಬಲದಿಂದ ಎಡಕ್ಕೆ (ಆ್ಯಂಟಿ ಕ್ಲಾಕ್ವೈಸ್)ಆರತಿ ಮಾಡಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ. ರಾಹುಲ್ ಅವರು ಆರತಿ ಮಾಡುತ್ತಿರುವ ವಿಡಿಯೊವನ್ನೂ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಭಾರಿ ಸಂಖ್ಯೆಯಲ್ಲಿ ಹಂಚಿಕೆಯಾಗಿದೆ. ಆದರೆ, ಟ್ವೀಟ್ನಲ್ಲಿರುವ ಮಾಹಿತಿ ಸುಳ್ಳು.
ಇದು ತಪ್ಪು ಮಾಹಿತಿ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ‘ಭಾರತ್ ಜೋಡೊ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಅವರು ಈಚೆಗೆ ಮಧ್ಯಪ್ರದೇಶದಲ್ಲಿ ನರ್ಮದಾ ಆರತಿ ಮಾಡಿದ್ದರು. ಆ ವಿಡಿಯೊವನ್ನು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ರಾಹುಲ್ ಗಾಂಧಿ ಅವರು ಅದರಲ್ಲಿ ಎಡದಿಂದ ಬಲಕ್ಕೆ ಆರತಿ ಮಾಡಿದ್ದಾರೆ. ಅವರ ಪಕ್ಕದಲ್ಲಿದ್ದ ಪುರೋಹಿತರೂ ಸಹ ಎಡದಿಂದ ಬಲಕ್ಕೆ ಆರತಿ ಮಾಡಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಸಹ ಗಂಗಾ ಆರತಿ ಸಂದರ್ಭದಲ್ಲಿ ಎಡದಿಂದ ಬಲಕ್ಕೇ ಆರತಿ ಮಾಡಿದ್ದಾರೆ. ಆದರೆ, ಅಮಿತ್ ಮಾಳವೀಯ ಅವರು ತಪ್ಪು ಮಾಹಿತಿ ಹಂಚಿಕೊಂಡು ಜನರ ಹಾದಿ ತಪ್ಪಿಸಿದ್ದಾರೆ. ಭೂಮಿ ಬಲದಿಂದ ಎಡಕ್ಕೆ ತಿರುಗುತ್ತದೆ. ಇದನ್ನು ಪ್ರಾಥಮಿಕ ಶಾಲೆಯಲ್ಲಿಯೇ ಹೇಳಿಕೊಡಲಾಗುತ್ತದೆ. ಈ ಮಾಹಿತಿಯನ್ನೂ ಮಾಳವೀಯ ಅವರು ತಪ್ಪಾಗಿ ಹಂಚಿಕೊಂಡಿದ್ದಾರೆ’ ಎಂದು ಆಲ್ಟ್ ನ್ಯೂಸ್ ತನ್ನ ಫ್ಯಾಕ್ಟ್ಚೆಕ್ನಲ್ಲಿ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.