‘ಅಯೋಧ್ಯೆಯಲ್ಲಿ ನೀರಿನ ಖಾಲಿ ಬಾಟಲಿಗಳನ್ನು ವಾಪಸು ಮಾಡಿದರೆ, ₹5 ಸಿಗಲಿದೆ. ವೈಜ್ಞಾನಿಕ ಹೊಸತನಕ್ಕೆ, ಪರಿಸರ ಸಂರಕ್ಷಣೆಗೆ ಇದೊಂದು ಮಹತ್ವದ ಉದಾಹರಣೆ. ಇಂಥ ಕ್ರಾಂತಿಯಿಂದ ನೀವು ಪುಳಕಿತರಾಗಿದ್ದೀರೇ?’– ಈ ಅರ್ಥದ ಹಲವು ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೆಲವರು ₹5 ಅನ್ನು ಬಹುಮಾನವನ್ನಾಗಿ ನೀಡಲಾಗುತ್ತದೆ ಎಂದೂ ಬರೆದುಕೊಂಡಿದ್ದಾರೆ. ನೀರಿನ ಖಾಲಿ ಬಾಟಲಿ ಮೇಲೆ ಕ್ಯುಆರ್ ಕೋಡ್ ಒಂದನ್ನು ಅಂಟಿಸಿರುವ ಫೋಟೊವನ್ನು ಇಂಥ ಪೋಸ್ಟ್ಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ತಿರುಚಲಾದ ಸುದ್ದಿ.
ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ಫೋಟೊದಲ್ಲಿರುವ ಬಾಟಲಿ ಮೇಲೆ ‘ದಿ ಕಬಾಡಿವಾಲಾ’ ಎನ್ನುವ ಹೆಸರಿದೆ. ಈ ಸಂಸ್ಥೆಯು ಅಯೋಧ್ಯೆಯಲ್ಲಿ ಇಂಥದ್ದೊಂದು ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಬಗ್ಗೆ ಈ ಸಂಸ್ಥೆಯೇ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಇಲ್ಲಿ, ಗಮನಿಸಬೇಕಾದ ಅಂಶವೊಂದಿದೆ. ₹10 ನೀರಿನ ಬಾಟಲಿಯನ್ನು ₹15ಕ್ಕೆ ಮಾರಾಟ ಮಾಡಲಾಗುತ್ತದೆ. ನಂತರ, ಖಾಲಿ ಬಾಟಲಿಯನ್ನು ವಾಪಾಸು ಮಾಡಿದರೆ, ಹೆಚ್ಚುವರಿಯಾಗಿ ಪಡೆದಿದ್ದ ₹5 ಅನ್ನು ವಾಪಸು ಕೊಡಲಾಗುತ್ತದೆ. ನಿಮ್ಮಿಂದ ಪಡೆಯಲಾಗಿದ್ದ ಹೆಚ್ಚುವರಿ 5 ರೂಪಾಯಿಯನ್ನು ವಾಪಸು ಕೊಡುತ್ತಾರೆಯೇ ಹೊರತು, ₹5 ಅನ್ನು ಬಹುಮಾನವಾಗಿ ನಿಡುವುದಿಲ್ಲ ಎಂದು ದಿ ಕ್ವಿಂಟ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ಜತೆಗೆ ಇದು ಅಯೋಧ್ಯೆಯಲ್ಲೇ ಮೊದಲ ಬಾರಿಗೆ ಆರಂಭವಾದ ವ್ಯವಸ್ಥೆ ಅಲ್ಲ. ಇಂತಹ ಪದ್ಧತಿ ಈಗಾಗಲೇ ಹಲವು ರಾಜ್ಯಗಳ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.