ADVERTISEMENT

ಪಾಕ್‌ ವಿರುದ್ಧ ಹೋರಾಟ|ಅಫ್ಗಾನ್‌ಗೆ ಭಾರತ ನೆರವು: ರಾಜನಾಥ ಸಿಂಗ್‌ ಹೇಳಿಕೆ ಸುಳ್ಳು

ಫ್ಯಾಕ್ಟ್ ಚೆಕ್
Published 21 ಅಕ್ಟೋಬರ್ 2025, 23:30 IST
Last Updated 21 ಅಕ್ಟೋಬರ್ 2025, 23:30 IST
   

‘ಪಾಕಿಸ್ತಾನದ ವಿರುದ್ಧ ಹೋರಾಡುವುದಕ್ಕಾಗಿ ಅಫ್ಗಾನಿಸ್ತಾನದ ತಾಲಿಬಾನ್‌ ಆಡಳಿತಕ್ಕೆ ಭಾರತ ಹಣಕಾಸಿನ ನೆರವು ನೀಡಿದೆ ಎಂದು  ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆಯಲ್ಲಿ ಹೇಳಿದ್ದಾರೆ. ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನವನ್ನು ನಾಶ ಮಾಡಿ ಅಖಂಡ ಭಾರತ ನಿರ್ಮಾಣ ಮಾಡುವ ಹಿಂದುತ್ವದ ದುರಾಲೋಚನೆಯನ್ನು ಇದು ಬಯಲಿಗೆಳೆದಿದೆ’ ಎಂದು ಪ್ರತಿಪಾದಿಸುತ್ತಾ, ರಾಜನಾಥ ಸಿಂಗ್‌ ಮಾತನಾಡಿದ್ದಾರೆ ಎನ್ನಲಾದ ಭಾಷಣದ ವಿಡಿಯೊ ತುಣುಕನ್ನು ಮನ್ಸೂರ್‌ ಅಹಮದ್‌ ಧಿಲ್ಲೋನ್‌ ಎಂಬವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ. 

ವಿಡಿಯೊ ತುಣುಕಿನ ಕೀ ಫ್ರೇಮ್‌ ಒಂದನ್ನು ಗೂಗಲ್‌ ಲೆನ್ಸ್‌ ಬಳಸಿ ಹುಡುಕಿದಾಗ, ಹಲವರು ಇದೇ ಪ್ರತಿಪಾದನೆಯೊಂದಿಗೆ ವಿಡಿಯೊ ತುಣುಕನ್ನು ಹಂಚಿರುವುದು ಕಂಡು ಬಂತು. ಜತೆಗೆ ರಾಜನಾಥ ಸಿಂಗ್‌ ಅವರ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಇದೇ 18ರಂದು ಪೋಸ್ಟ್‌ ಮಾಡಲಾದ ವಿಡಿಯೊ ಸಿಕ್ಕಿತು. ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ತುಣುಕಿಗೂ ಈ ವಿಡಿಯೊಕ್ಕೂ ಹೋಲಿಕೆ ಇರುವುದು ಕಂಡು ಬಂತು. ಲಖನೌದಲ್ಲಿ ಬ್ರಹ್ಮೋಸ್‌ ಕ್ಷಿಪಣಿಗಳ ಮೊದಲ ಬ್ಯಾಚ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ವಿಡಿಯೊ ಅದಾಗಿತ್ತು. ಪೋಸ್ಟ್‌ನಲ್ಲಿ ಇರುವಂತೆ ಆರ್‌ಎಸ್‌ಎಸ್‌ ಶತಮಾನೋತ್ಸವ ಕಾರ್ಯಕ್ರಮವಲ್ಲ. ವಿಡಿಯೊದಲ್ಲಿದ್ದ ಪೂರ್ತಿ ಭಾಷಣ ಕೇಳಿದಾಗ, ಅವರೆಲ್ಲೂ ಅಫ್ಗಾನಿಸ್ತಾನಕ್ಕೆ ನೆರವು ನೀಡಿರುವ ಬಗ್ಗೆ ಹೇಳಿಲ್ಲ. ಅನುಮಾನ ಬಂದು ವಿಡಿಯೊದಲ್ಲಿನ ಆಡಿಯೊವನ್ನು ಎಐ ಧ್ವನಿ ಪತ್ತೆ ಮಾಡುವ ರಿಸೆಂಬಲ್‌ ಎಐ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ, ಅದು ತಿರುಚಿದ ಆಡಿಯೊ ಎಂಬುದು ದೃಢಪಟ್ಟಿತು. ಮೂಲ ವಿಡಿಯೊದಲ್ಲಿದ್ದ ಧ್ವನಿಯನ್ನು ತಿರುಚಿ ನಕಲಿ ಆಡಿಯೊವನ್ನು ಸೃಷ್ಟಿಸಲಾಗಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT