ವ್ಯಕ್ತಿಯೊಬ್ಬ ಪೊಲೀಸ್ ಮೇಲೆ ಕೈಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅನುಚಿತವಾಗಿ ವರ್ತಿಸಿದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬ ಮಾಹಿತಿಯೊಂದಿಗೆ ಈ ಚಿತ್ರ ಹರಿದಾಡುತ್ತಿದೆ. ‘ಮುಸ್ಲಿಮರಜನಸಂಖ್ಯೆ ಶೇ 18ರಷ್ಟು ಇರುವಾಗಲೇ ಪರಿಸ್ಥಿತಿ ಹೀಗಿದೆ, ಇನ್ನು ಶೇ 30ರಷ್ಟು ಜನಸಂಖ್ಯೆ ಆದರೆ ಪರಿಸ್ಥಿತಿ ಹೇಗಿರಬಹುದು’ ಎಂಬ ಅಡಿಬರಹವನ್ನು ಈ ಚಿತ್ರಕ್ಕೆ ನೀಡಲಾಗಿದೆ. ಆರೋಪಿ ಮಝ್ಲೂಮ್ ಅಹ್ಮದ್ ರಾಜಸ್ಥಾನದ ಕರೌಲಿ ಪ್ರದೇಶಕ್ಕೆ ಸೇರಿದವನು. ಆತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯ ಎಂದು ಬಿಂಬಿಸಲಾಗಿದೆ.
ಚಿತ್ರದ ಜೊತೆ ನೀಡಲಾಗಿರುವ ಮಾಹಿತಿ ಸುಳ್ಳು. ಈ ಘಟನೆ ನಡೆದಿರುವುದು ಜೋಧಪುರದಲ್ಲಿ ಎಂದು ಆಲ್ಟ್ ನ್ಯೂಸ್ ವೇದಿಕೆ ವರದಿ ಮಾಡಿದೆ. ಈ ಘಟನೆ ನಡೆದಿರುವುದು 2016ರಲ್ಲಿ. ಈ ಕುರಿತು ದೈನಿಕ್ ಭಾಸ್ಕರ್ ಪತ್ರಿಕೆ ಅಂದೇ ವರದಿ ಮಾಡಿತ್ತು. ಜೋಧಪುರದ ಘಂಟಗರ್ ಪ್ರದೇಶದಲ್ಲಿ ವಾಹನ ದಟ್ಟಣೆ ತಗ್ಗಿಸುವ ಸಲುವಾಗಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ನಗರ ಪಾಲಿಕೆ ಆದೇಶ ನೀಡಿತ್ತು. ಆ ಕೆಲಸಕ್ಕಾಗಿ ನಿಯೋಜನೆ ಆಗಿದ್ದ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಬೀದಿ ಬದಿ ವ್ಯಾಪಾರಿಯೊಬ್ಬನು ಹಲ್ಲೆಗೆ ಮುಂದಾಗಿದ್ದ. ಶಂಕಿತನ ಹೆಸರನ್ನು ಧರ್ಮೇಂದ್ರ ಎಂದು ಗುರುತಿಸಲಾಗಿತ್ತು. ಆತನನ್ನು ಬಂಧಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.