ADVERTISEMENT

ಪಾಲ್ಗರ್ ಪ್ರಕರಣದಲ್ಲಿ ನ್ಯಾಯ ಬೇಕು ಎಂದು ಸಾಧುಗಳು ಒಗ್ಗೂಡಿ ಎಚ್ಚರಿಕೆ ನೀಡಿಲ್ಲ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 15:09 IST
Last Updated 27 ಏಪ್ರಿಲ್ 2020, 15:09 IST
   

ಮುಂಬೈ:'ಪಾಲ್ಗರ್ ಪ್ರಕರಣದಲ್ಲಿ ನ್ಯಾಯ ಕೊಡಿಸದೇ ಇದ್ದರೆ ಲಾಕ್‍ಡೌನ್ ಮುಗಿದ ನಂತರ ಪ್ರತಿಭಟನೆ ನಡೆಸುತ್ತೇವೆ ಎಂಬ ಎಚ್ಚರಿಕೆ ನೀಡಿ ಜುನಾ ಅಖಾಡದ ಸಾಧುಗಳು ಒಟ್ಟು ಸೇರಿರುವುದು'ಎಂಬ ಬರಹದೊಂದಿಗೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ಏಪ್ರಿಲ್ 16 ರಂದು ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ಕಳ್ಳರೆಂದು ಭಾವಿಸಿ ಶ್ರೀ ಪಂಚ ದಶನಂ ಜುನಾ ಅಖಾಡದ ಮೂವರು ಸಾಧುಗಳನ್ನು ಅಲ್ಲಿನ ಗ್ರಾಮದವರು ಹೊಡೆದು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 100ಕ್ಕಿಂತಲೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನಾಶಿಕ್‌ನ ತ್ರಯಂಕೇಶ್ವರ್‌ನಲ್ಲಿ ಸೇರುವುದಾಗಿ ಜುನಾ ಅಖಾಡ ಸಾಧುಗಳು ಹೇಳಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್

ಏಪ್ರಿಲ್ 20ರಂದು ಗುಂಜನ್ ಕಶ್ಯಪ್ ಎಂಬ ಟ್ವೀಟಿಗರೊಬ್ಬರು ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದು, ಅದು ಇಲ್ಲಿಯವರೆಗೆ 300ಕ್ಕಿಂತ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಈ ವಿಡಿಯೊಗೆ ನೀಡಿದ ಶೀರ್ಷಿಕೆ ಹೀಗಿದೆ.ಮಹಾರಾಷ್ಟ್ರ ಸರ್ಕಾರಕ್ಕೆ ಈ ಚಂಡಮಾರುತವನ್ನು ನಿಲ್ಲಿಸಲು ಸಾಧ್ಯವೇ? ಪಾಲ್ಗರ್ ಪ್ರಕರಣದಲ್ಲಿ ಶೀಘ್ರವೇ ನ್ಯಾಯಕೊಡಿಸಿ ಎಂದು ನಾನು ಒತ್ತಾಯಿಸುತ್ತಿದ್ದೇನೆ. ಇಲ್ಲದೇ ಇದ್ದರೆ ಜುನಾ ಅಖಾಡದ ಜನರು ಲಾಕ್‍ಡೌನ್ ನಂತರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಫ್ಯಾಕ್ಟ್‌ಚೆಕ್
ಈ ವಿಡಿಯೊ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ನಡೆಸಿದ್ದು ಈ ಹಿಂದೆಯೂ ಇದೇ ವಿಡಿಯೊವನ್ನು 'ಸಿಎಎ ಬೆಂಬಲಿಸಿದ ಸಾಧುಗಳು' ಎಂದು ಬಳಸಲಾಗಿತ್ತು ಎಂದು ವರದಿ ಮಾಡಿದೆ. ಆದಾಗ್ಯೂ ಇದೇ ವಿಡಿಯೊವನ್ನು ಏವಿಯೇಟರ್ ಅನಿಲ್ ಚೋಪ್ರಾ ಎಂಬವರು ಈ ಹಿಂದೆಯೇ ಟ್ವೀಟ್ ಮಾಡಿದ್ದರು. 2019 ಮಾರ್ಚ್ 7ರಂದು ಪೋಸ್ಟ್ ಮಾಡಿದ್ದ ಈ ವಿಡಿಯೊಗೆ ನೀಡಿದ ಶೀರ್ಷಿಕೆ:ಭೂಮಿಯ ಮೇಲಿನ ಅತಿದೊಡ್ಡ ತಾತ್ಕಾಲಿಕ ಚಮತ್ಕಾರ, ಶಾಂತಿಯುತ ಮತ್ತು ಕ್ರಮಬದ್ಧವಾದ ಮಾನವೀಯತೆಯ ಸಮೂಹ. ಅನನ್ಯವಾದ ಭಾರತೀಯ ನಾಗರಿಕತೆ. ಕುಂಭ2019.

ಈ ವಿಡಿಯೊದಲ್ಲಿನ ದೃಶ್ಯವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾದ ಮಾರ್ಚ್11, 2019ರಲ್ಲಿ ಸುರೇಶ್ ಕುಮಾರ್ ಎಂಬವರು ಪೋಸ್ಟ್ ಮಾಡಿದ ವಿಡಿಯೊ ಸಿಕ್ಕಿದೆ. ಆ ವಿಡಿಯೊಗೆ ನೀಡಿದ ಶೀರ್ಷಿಕೆ ಕುಂಭ ಮೇಳ ನಾಗಸಾಧು ಎಂಬುದಾಗಿದೆ.

ಜನವರಿ 15 ರಿಂದ ಮಾರ್ಚ್ 4ರವರೆಗೆನಡೆಯುವ ಕುಂಭ ಮೇಳದಲ್ಲಿ ದಶಲಕ್ಷ ತೀರ್ಥಯಾತ್ರಿಕರು ಭಾಗವಹಿಸುತ್ತಾರೆ.

ಏತನ್ಮಧ್ಯೆ, ಯೂಟ್ಯೂಬ್‌ನಲ್ಲಿ ಈ ವಿಡಿಯೊ ಬಗ್ಗೆ ಬೇರೆ ಬೇರೆ ವಿವರಣೆ ಇದೆ. 2019 ಮಾರ್ಚ್ 3ರಂದು ಅಪ್‍ಲೋಡ್ ಆಗಿರುವ ವಿಡಿಯೊದಲ್ಲಿ ಜುನಾಘಡ್ ನಾಗಾ ಬಾವಾ ಎಂಬ ಶೀರ್ಷಿಕೆ ಇದೆ. ಈ ವಿಡಿಯೊ ಮಹಾಶಿವರಾತ್ರಿಯದ್ದು ಎಂದು ಹೇಳಲಾಗಿದೆ. 2019 ಮಾರ್ಚ್ 4ರಂದು ಮಹಾಶಿವರಾತ್ರಿ ಆಚರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.