
ರಾಮಮಂದಿರದ ದೇಣಿಗೆ ಪೆಟ್ಟಿಗೆಯು ಭರ್ತಿಯಾಗಿದೆ ಎಂಬಂಥ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೆಟ್ಟಿಗೆಯಿಂದ ಕಂತೆ ಕಂತೆ ನೋಟುಗಳನ್ನು ಬುಟ್ಟಿಗೆ ತುಂಬುವ ದೃಶ್ಯ ಇರುವ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ‘ಅಯೋಧ್ಯಾ ಧಾಮದಲ್ಲಿ ರಾಮಮಂದಿರವು (ಜ.22) ಉದ್ಘಾಟನೆಯಾಗಿದೆ. ಉದ್ಘಾಟನೆಯಾದ ಅರ್ಧ ದಿನದಲ್ಲಿಯೇ ಮಂದಿರದ ದೇಣಿಗೆ ಪೆಟ್ಟಿಗೆಯು ಭರ್ತಿಯಾಗಿದೆ. ಇದನ್ನೇ ದೇವಸ್ಥಾನ ಆರ್ಥಿಕತೆ ಎನ್ನುತ್ತಾರೆ. ಇದರಿಂದ ಎಷ್ಟೊಂದು ಶಾಲೆಗಳನ್ನು ಹಾಗೂ ಆಸ್ಪತ್ರೆಗಳನ್ನು ಕಟ್ಟಿಸಬಹುದಲ್ಲವೇ?’ ಎಂಬ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದ ದೃಶ್ಯವನ್ನು ರಿವರ್ಸ್ ಇಮೇಜ್ನಲ್ಲಿ ಹಡುಕಿದಾಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೊವೊಂದು ದೊರೆಯಿತು. @sanwaliya_seth_1007 ಎನ್ನುವ ಖಾತೆಯು ಈ ವಿಡಿಯೊವನ್ನು 2024ರ ಜನವರಿ 16ರಂದು ಹಂಚಿಕೆಯಾಗಿತ್ತು. ‘ಶ್ರೀ ಸಾಂವರಿಯಾ ಸೇಠ್: ಈ ಬಾರಿ ದಾಖಲೆಯ 12 ಕೋಟಿ 69 ಲಕ್ಷ ದೇಣಿಯು ಸಂಗ್ರಹವಾಗಿದೆ’ ಎಂದು ಬರೆದುಕೊಂಡಿತ್ತು. ಈ ಖಾತೆಯ ಬಯೊದಲ್ಲಿ, ತಾನು ಸಾಂವರಿಯಾ ಸೇಠ್ ಮಂದಿರದ ಅರ್ಚಕ ಎಂದು ಬರೆದುಕೊಳ್ಳಲಾಗಿದೆ. ಈ ಮಂದಿರವು ರಾಜಸ್ಥಾನದಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗೂ, ಈ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೊಗೂ ಸಾಮ್ಯತೆ ಇದೆ. ಜೊತೆಗೆ, ರಾಮಮಂದಿರದ ದೇಣಿಗೆ ಪೆಟ್ಟಿಗೆ ಕುರಿತು ‘ಆಜ್ತಕ್’ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ತೋರಿಸಲಾದ ಪೆಟ್ಟಿಗೆಯ ದೃಶ್ಯಗಳಿಗೂ ಈಗ ಹಂಚಿಕೆಯಾಗುತ್ತಿರುವ ವಿಡಿಯೊಗೂ ಸಾಮ್ಯತೆ ಇಲ್ಲ ಎಂದು ಬೂಮ್ಲೈವ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.