ADVERTISEMENT

ಅಧಿಕಾರಕ್ಕಾಗಿ ಮತ್ತೆ ರಾಮನತ್ತ ಮುಖ ಮಾಡಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 9:40 IST
Last Updated 27 ಜನವರಿ 2012, 9:40 IST

ಲಖನೌ (ಪಿಟಿಐ):  ಉತ್ತರ ಪ್ರದೇಶದ  ರಾಜ್ಯ ರಾಜಕಾರಣದಲ್ಲಿ ಮುಂಚೂಣಿಯಲ್ಲಿರಲು ಹೆಣಗಾಡುತ್ತಿರುವ ಭಾರತೀಯ ಜನತಾ ಪಕ್ಷವು, ಪ್ರಸಕ್ತ ವಿಧಾನ ಸಭಾ ಚುನಾವಣೆಯಲ್ಲಿ ಮತ ಗಳಿಕೆಯ ಉದ್ದೇಶದಿಂದ ಈಗ ಮತ್ತೆ ರಾಮ ಜನ್ಮ ಭೂಮಿ ಅಯೋಧ್ಯೆಯತ್ತ ಮುಖ ಮಾಡಿದೆ.

ಉತ್ತರ ಪ್ರದೇಶದಲ್ಲಿನ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ,  ಮತ್ತೆ ರಾಮನತ್ತ ಮುಖ ಮಾಡಿದ ಬಿಜೆಪಿಯು, ~ತನ್ನನ್ನು ಅಧಿಕಾರಕ್ಕೆ ತಂದರೆ ತಾನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದಾಗಿ~ ಭರವಸೆ ನೀಡಿದೆ.

ಎಂಬತ್ತರ ದಶಕ ಮತ್ತು ತೊಂಬತ್ತರ ದಶಕದ ಆದಿಯಲ್ಲಿ ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಗೆ ಬರುವಂತೆ ಮಾಡಿದ್ದ ಅಯೋಧ್ಯೆಯ ರಾಮಮಂದಿರ ವಿವಾದವನ್ನೇ ಈಗ ಬಿಜೆಪಿಯು ಮತ್ತೆ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ.

ADVERTISEMENT

ಮರ್ಯಾದಾ ಪುರುಷ ಶ್ರೀರಾಮ, ದೇಶದ ಘನತೆ, ಗೌರವ ಮತ್ತು ಹೆಮ್ಮೆಯ ಪ್ರತೀಕ. ಬೃಹತ್ ರಾಮಮಂದಿರ ನಿರ್ಮಾಣ ದೇಶದ ಕೋಟ್ಯಂತರ ಜನರ ವಿಶ್ವಾಸ, ನಂಬಿಕೆಗಳಿಗೆ ಸಂಬಂಧಪಟ್ಟಿದೆ.  ದುರದೃಷ್ಟದಿಂದ ತೋರಿಕೆಯ ಹುಸಿ ಜಾತ್ಯತೀತತೆ ಮತ್ತು ಮತಬ್ಯಾಂಕ್ ರಾಜಕಾರಣದ ಹಿನ್ನೆಲೆಯಲ್ಲಿ ಅದಕ್ಕೆ ವಿರೋಧ ವ್ಯಕ್ತಪಡಿಸಲಾಗಿತ್ತಿದೆ. ಬಿಜೆಪಿಯು, ರಾಮ ಮಮದಿರ ನಿರ್ಮಾಣಕ್ಕೆ ಏನೆ ಅಡೆತಡೆಗಳು ಬಂದರೂ ಅವನ್ನು ನಿವಾರಿಸಿಕೊಂಡು ರಾಮಮಂದಿರ ಕಟ್ಟುತ್ತದೆ~ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಬಿಜೆಪಿಯ ಹಿರಿಯ ನಾಯಕರಾದ ಉಮಾ ಭಾರತಿ, ಕಲ್ ರಾಜ್ ಮಿಶ್ರಾ, ಮುಖ್ತರ್ ಅಬ್ಬಾಸ್ ನಖ್ವಿ, ನರೇಂದ್ರ ಸಿಂಗ್ ತೋಮರ್, ಸುಧೀಂದ್ರ ಕುಲಕರ್ಣಿ ಮತ್ತು ಉತ್ತರ ಪ್ರದೇಶದ ಬಿಜೆಪಿ ಘಟಕದ ಅಧ್ಯಕ್ಷ ಸುರ್ಯ ಪ್ರತಾಪ್ ಶಾಹಿ ಮೊದಲಾದವರು ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.