ಜೈಪುರ, ರಾಜಾಸ್ತಾನ (ಪಿಟಿಐ): ` ವಿದೇಶಗಳಲ್ಲಿ ಅದರಲ್ಲೂ ಅರಬ್ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷಾಂತರ ಅನಿವಾಸಿ ಭಾರತೀಯ ಕಾರ್ಮಿಕರ ಬಹು ದಿನಗಳ ಬೇಡಿಕೆಯಾದ ಭವಿಷ್ಯದ ಬದುಕಿಗೆ ಅನುಕೂಲವಾಗುವ ಜೀವ ವಿಮಾ ಮತ್ತು ಪಿಂಚಣಿ ಯೋಜನೆಯನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಭಾನುವಾರ ಇಲ್ಲಿ ಘೋಷಿಸಿದರು.
`ಪಿಂಕ್ ಸಿಟಿ~ ಎಂದೇ ಹೆಸರಾಗಿರುವ ಜೈಪುರದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ~10ನೇ ಪ್ರವಾಸಿ ಭಾರತೀಯ ದಿವಸ್~ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.
`ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂಧಿಸಿದೆ. ಸುಮಾರು ಐದು ಮಿಲಿಯನ್ ಗೂ ಅಧಿಕ, ಮುಖ್ಯವಾಗಿ ಅರಬ್ ದೇಶಗಳಲ್ಲಿರುವ ಅನಿವಾಸಿ ಭಾರತೀಯ ಉದ್ಯೋಗಿಗಳಿಗಾಗಿಯೇ ನೂತನ ಜೀವ ವಿಮಾ ನಿಧಿ ಮತ್ತು ಪಿಂಚಣಿ ಯೋಜನೆಯನ್ನು ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವುದನ್ನು ತಿಳಿಸಲು ನನಗೆ ಸಂತೋಷವಾಗುತ್ತಿದೆ~ಎಂದಿದ್ದಾರೆ.
ಅನಿವಾಸಿ ಭಾರತೀಯರು ಭವಿಷ್ಯದಲ್ಲಿ ತಮ್ಮ ನಿವೃತ್ತಿಯ ನಂತರ ಜೀವನವನ್ನು ರೂಪಿಸಿಕೊಳ್ಳಲು ಈ ಯೋಜನೆಯಲ್ಲಿ ಅವರು ಹಣ ಉಳಿತಾಯ ಮಾಡುವುದನ್ನು ಪ್ರೋತ್ಸಾಯಿಸುತ್ತದೆ. ಸಚಿವ ಸಂಪುಟವು ಇತ್ತೀಚಿಗೆ ಈ ಯೋಜನೆಯ ಅನುಷ್ಠಾನಕ್ಕೆ ಮನ್ನಣೆ ನೀಡಿದೆ. ಇದರೊಂದಿಗೆ ಈ ಯೋಜನೆಯು ಸಹಜ ಸಾವಿಗೂ ಕೂಡ ಜೀವ ವಿಮೆ ರಕ್ಷಣೆಯನ್ನು ಒದಗಿಸುತ್ತದೆ~ ಎಂದರು.
ಸುಮಾರು 60 ದೇಶಗಳಿಂದ ಸುಮಾರು 1,900ಗೂ ಅಧಿಕ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.