ADVERTISEMENT

ಅಮರಾವತಿಯಲ್ಲಿ ಹೈಪರ್‌ಲಿಂಕ್‌ ಸಾರಿಗೆ?

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:35 IST
Last Updated 25 ಫೆಬ್ರುವರಿ 2018, 19:35 IST

ವಿಶಾಖಪಟ್ಟಣ: ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿ ಮತ್ತು  ವಿಜಯವಾಡದ ಮಧ್ಯೆ ಹೈಪರ್‌ಲಿಂಕ್‌ ಸಾರಿಗೆ ಸೌಲಭ್ಯ ಕಲ್ಪಿಸಲು ಅಲ್ಲಿನ  ಸರ್ಕಾರ ಚಿಂತನೆ ನಡೆಸಿದೆ.

ಈ ಸೌಲಭ್ಯ ಸಾಕಾರಗೊಂಡಲ್ಲಿ ಎರಡೂ ನಗರಗಳ ನಡುವಿರುವ 40 ಕಿಲೋ ಮೀಟರ್‌ ಅಂತರವನ್ನು ಕೇವಲ ಆರೇ ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.

ದೇಶದಲ್ಲಿರುವ ಸಮೂಹ ಸಾರಿಗೆ ವ್ಯವಸ್ಥೆಯನ್ನು ಪರಿವರ್ತಿಸುವ ಸಾಮರ್ಥ್ಯ ನೂತನ ಸಾರಿಗೆ ವ್ಯವಸ್ಥೆ ಹೊಂದಿದೆ ಎಂದು ಹೈಪರ್‌ಲೂಪ್‌ ಟ್ರಾನ್ಸ್‌ಪೋರ್ಟೆಶನ್‌ ಟೆಕ್ನಾಲಜೀಸ್‌ನ ಸಹಸಂಸ್ಥಾಪಕ ಮತ್ತು ಅಧ್ಯಕ್ಷ ಬಿಬೊಪ್‌ ಗ್ರೆಸ್ಟಾ ಇಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ADVERTISEMENT

’ನದಿ ದಂಡೆಯಲ್ಲಿ ಉದಯಿಸುತ್ತಿರುವ ರಾಜಧಾನಿ ಈ ವಿಶಿಷ್ಟ ಸಾರಿಗೆ ಸೌಲಭ್ಯ ಹೊಂದಲು ಸೂಕ್ತ ಸ್ಥಳವಾಗಿದೆ. ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ. ಜನ ಸಂಚಾರಕ್ಕೆ ಮತ್ತು ಸರಕುಗಳು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ವೇಗ, ಸಮರ್ಥ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುವ ಮಾರ್ಗದ ಅಗತ್ಯವಿದೆ’ ಎಂದಿದ್ದಾರೆ.

‘ಬಳಕೆಯಾಗುವುದಕ್ಕಿಂತಲೂ ಹೆಚ್ಚು ವಿದ್ಯುತ್‌ ಉತ್ಪಾದಿಸಲು ನವೀಕರಿಸಬಹುದಾದ ಇಂಧನಗಳ ಸಂಯೋಜನೆಯನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಕೈಗೆಟುಕುವ ವೆಚ್ಚದಲ್ಲಿ ಇದನ್ನು ನಿರ್ಮಾಣ ಮತ್ತು ನಿರ್ವಹಿಸಬಹುದಾಗಿದೆ’ ಎಂದು ಅವರು ಹೇಳಿದ್ದಾರೆ.

ಆಂಧ್ರಪ್ರದೇಶ ಆರ್ಥಿಕ ಅಭಿವೃದ್ಧಿ ಮಂಡಳಿ (ಎಪಿ–ಎಡಿಬಿ) ಮತ್ತು ಅಮೆರಿಕ ಮೂಲದ ಹೈಪರ್‌ಲೂಪ್‌ ಟ್ರಾನ್ಸ್‌ಪೋರ್ಟ್‌ ಟೆಕ್ನಾಲಜೀಸ್‌ (ಎಚ್‌ಟಿಟಿ) ಕಂಪೆನಿ ಒಪ್ಪಂದ ಮಾಡಿಕೊಂಡ ಬಳಿಕ ಈ ಯೋಜನೆಯ ಕಾರ್ಯಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲು ಕಳೆದ ಸೆಪ್ಟೆಂಬರ್‌ನಲ್ಲಿ ಸರ್ಕಾರ ಹೇಳಿತ್ತು. ಈ ಅಧ್ಯಯನ ಮುಗಿದ ಬಳಿಕ ಮುಖ್ಯಮಂತ್ರಿ ಸಮ್ಮತಿ ನೀಡಿದರೆ ಯೋಜನೆ ಕಾರ್ಯಗತಗೊಳಿಸಲು ನಾವು ಸಿದ್ಧರಾಗಿದ್ದೇವೆ ಎಂದು ಗ್ರೆಸ್ಟಾ ತಿಳಿಸಿದ್ದಾರೆ.

**

ಇಪ್ಪತ್ತೇ ನಿಮಿಷದಲ್ಲಿ ಚೆನ್ನೈಗೆ

ಬೆಂಗಳೂರು–ಚೆನ್ನೈ, ಮುಂಬೈ–ಚೆನ್ನೈ (ಬೆಂಗಳೂರು ಮಾರ್ಗ),  ಬೆಂಗಳೂರು–ತಿರುವುನಂತಪುರ, ಮುಂಬೈ–ದೆಹಲಿ ಮತ್ತು ಮುಂಬೈ–ಕೋಲ್ಕತ್ತ ನಡುವೆ ಈ ಸಾರಿಗೆ ಮಾರ್ಗ ನಿರ್ಮಿಸುವ ಕುರಿತು ಅಧ್ಯಯನ ನಡೆಸುವುದಾಗಿ ಕಳೆದ ಮಾರ್ಚ್‌ನಲ್ಲಿ  ಲಾಸ್‌ಏಂಜಲೀಸ್‌ ಮೂಲದ ಹೈಪರ್‌ಲೂಪ್‌ ಕಂಪನಿ ಘೋಷಿಸಿತ್ತು.

ಬೆಂಗಳೂರು ಮತ್ತು ಚೆನ್ನೈ ನಡುವೆ ಹೈಪರ್‌ಲೂಪ್‌ ಮಾರ್ಗ ನಿರ್ಮಾಣವಾದರೆ. ಎರಡೂ ನಗರಗಳ ನಡುವಿನ ಅಂತರವನ್ನು 20 ನಿಮಿಷ ಮತ್ತು ಮುಂಬೈ–ಚೆನ್ನೈ (ಬೆಂಗಳೂರು ಮಾರ್ಗವಾಗಿ) ನಗರಗಳ ನಡುವಿನ ದೂರವನ್ನು ಕೇವಲ 50 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.