ADVERTISEMENT

ಅರ್ಜಿ ವಾಪಸ್‌ ಪಡೆಯಲು ನಿರ್ಧಾರ

ಪಿಟಿಐ
Published 17 ಜೂನ್ 2018, 17:55 IST
Last Updated 17 ಜೂನ್ 2018, 17:55 IST
ಮದ್ರಾಸ್‌ ಹೈಕೋರ್ಟ್‌
ಮದ್ರಾಸ್‌ ಹೈಕೋರ್ಟ್‌   

ಚೆನ್ನೈ: ತಮಿಳುನಾಡು ವಿಧಾನಸಭೆಯ ಸ್ಪೀಕರ್‌ ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ, ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್‌ ಪಡೆಯಲು 18 ಮಂದಿ ಮಾಜಿ ಶಾಸಕರು ನಿರ್ಧರಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ವಿರುದ್ಧ ಬಂಡಾಯ ಸಾರಿದ್ದರಿಂದ ಕಳೆದ ವರ್ಷ ಇವರನ್ನು ಅನರ್ಹಗೊಳಿಸಲಾಗಿತ್ತು. ಅರ್ಜಿ ವಾಪಸ್‌ ಪಡೆಯುವ ನಿರ್ಧಾರವನ್ನು ಭಾನುವಾರ ಪ್ರಕಟಿಸಿದ ಮಾಜಿ ಶಾಸಕ ತಂಗ ತಮಿಳ್‌ಸೆಲ್ವನ್‌, ಉಪಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವುದಾಗಿ ತಿಳಿಸಿದರು.

ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌ನ ವಿಭಾಗೀಯ ಪೀಠ ಭಿನ್ನ ತೀರ್ಪು ನೀಡಿತ್ತು. ಹೀಗಾಗಿ ಪ್ರಕರಣವು ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠಕ್ಕೆ ವರ್ಗಾಯಿಸಲಾಗಿದೆ.

ADVERTISEMENT

‘ಕಳೆದ 10 ತಿಂಗಳಿನಿಂದ ತಮ್ಮ ಕ್ಷೇತ್ರಕ್ಕೆ ಜನಪ್ರತಿನಿಧಿಗಳು ಇಲ್ಲದಂತಾಗಿದೆ. ಆದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ತಂಗ ತಮಿಳ್‌ಸೆಲ್ವನ್‌ ತಿಳಿಸಿದ್ದಾರೆ.

‘ನಮ್ಮ ತಪ್ಪಿನಿಂದಾಗಿ ಸದಸ್ಯತ್ವ ಕಳೆದುಕೊಂಡಿಲ್ಲ. ನಾವು ಕ್ಷೇತ್ರಕ್ಕೆ ಹೋಗಲೂ ಸಾಧ್ಯವಾಗಿಲ್ಲ. ವಿಧಾನಸಭೆಯಲ್ಲಿ ನಮ್ಮ ಕ್ಷೇತ್ರದ ಸಮಸ್ಯೆಗಳು ಚರ್ಚೆಯಾಗುತ್ತಿಲ್ಲ. ನಾವು ಈಗಲೂ ಪ್ರಜಾಪ್ರಭುತ್ವದ ಕರ್ತವ್ಯಗಳನ್ನು ನಿರ್ವಹಿಸಲು ಸಿದ್ಧವಾಗಿದ್ದೇವೆ. ಅದಕ್ಕಾಗಿ ಉಪಚುನಾವಣೆಯಲ್ಲಿ ಸ್ಪರ್ಧೆಮಾಡಲು ನಿರ್ಧರಿಸಿದ್ದೇವೆ’ ಎಂದೂ ಹೇಳಿದ್ದಾರೆ.

ಟಿಟಿವಿ ದಿನಕರನ್‌ ಬೆಂಬಲಿಗರಾಗಿರುವ ತಮಿಳ್‌ಸೆಲ್ವನ್‌ ಸೇರಿ 18 ಶಾಸಕರನ್ನು ವಿಧಾನಸಭಾಧ್ಯಕ್ಷ ಪಿ. ಧನಪಾಲ್ ಅವರು ಕಳೆದ ವರ್ಷ ಅನರ್ಹಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.