ADVERTISEMENT

ಆದರ್ಶ ಸೊಸೈಟಿ ಭೂಮಿ ಸರ್ಕಾರದ್ದು

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 19:30 IST
Last Updated 17 ಜೂನ್ 2011, 19:30 IST

ಮುಂಬೈ (ಪಿಟಿಐ): ಆದರ್ಶ್ ಸೊಸೈಟಿಗೆ ನೀಡಿದ ಭೂಮಿ ಮಹಾರಾಷ್ಟ್ರ ಸರ್ಕಾರಕ್ಕೆ ಸೇರಿದ್ದೇ ವಿನಾಃ ಕಾರ್ಗಿಲ್ ಯೋಧರು ಅಥವಾ ಸೇನಾ ಸಿಬ್ಬಂದಿಗೆ ಮೀಸಲಾಗಿಟ್ಟ ಜಾಗವಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಶುಕ್ರವಾರ  ಸ್ಪಷ್ಟಪಡಿಸಿದ್ದಾರೆ.

ಆದರ್ಶ್ ವಸತಿ ಯೋಜನೆ ಅವ್ಯವಹಾರ ತನಿಖೆ ನಡೆಸುತ್ತಿರುವ ದ್ವಿಸದಸ್ಯ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

`ಮುಂಬೈ ಜಿಲ್ಲಾಧಿಕಾರಿ ಕಚೇರಿ ದಾಖಲೆಗಳಲ್ಲಿ ಈ ಭೂಮಿ ಸರ್ಕಾರಕ್ಕೆ ಸೇರಿದ್ದು ಎಂಬ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಈ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಎಂದಿಗೂ ಮತ್ತು ಯಾವ ಹಂತದಲ್ಲೂ ವಿವಾದಗಳು ಇರಲಿಲ್ಲ ಎಂದು ಅವರು ಹೇಳಿದ್ದಾರೆ.
 
ಬೃಹತ್ ಮುಂಬೈ ಅಭಿವೃದ್ಧಿ ಯೋಜನೆ ಸೇರಿದಂತೆ ರಾಜ್ಯ ಸರ್ಕಾರದ ಯಾವುದೇ ಯೋಜನೆಗಳಲ್ಲಿ ಈ ಭೂಮಿಯನ್ನು ಸೇನಾ ಸಿಬ್ಬಂದಿ ಅಥವಾ ಕಾರ್ಗಿಲ್ ಯೋಧರ ವಸತಿಗಾಗಿಯೇ ಮೀಸಲಾಗಿ ಇಟ್ಟ ಬಗ್ಗೆ ದಾಖಲೆಗಳಿಲ್ಲ ಎಂದು ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯದ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ ಶಿಂಧೆ ಈಚೆಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಇದೇ ರೀತಿಯ ಹೇಳಿಕೆ ನೀಡಿದ್ದರು. ಸಾಮಾಜಿಕ ಕಾರ್ಯಕರ್ತ ಸಂತೋಷ್ ದೌಂಡಕರ್ ಎಂಬುವರು ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಮ್ಮ ವಿರುದ್ಧ ಮಾಡಲಾದ ಎಲ್ಲ ಆರೋ ಗಳನ್ನು ಅವರು ಸರಾಸಗಟಾಗಿ ತಳ್ಳಿಹಾಕಿದ್ದಾರೆ.

ತಾವು ಮುಖ್ಯಮಂತ್ರಿಯಾಗಿದ್ದಾಗ ಆದರ್ಶ್ ಸೊಸೈಟಿಯ ಕನ್ನಯ್ಯಲಾಲ್ ಗಿದ್ವಾನಿ ಅವರನ್ನು ಪದೇ ಪದೇ ಭೇಟಿಯಾದ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವಸೇನೆಯ ಗಿದ್ವಾನಿ ಅವರೂ ವಿಧಾನ ಪರಿಷತ್ ಸದಸ್ಯರಾಗಿದ್ದರು. ಸಹಜವಾಗಿ ಅವರು ತಮ್ಮನ್ನು ಭೇಟಿಯಾಗಿರಬಹುದು. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದಿದ್ದಾರೆ.

ಗಿದ್ವಾನಿ ಒತ್ತಡದಿಂದ ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನು ಆದರ್ಶ್ ವಸತಿ ಯೋಜನೆಗೆ ನೀಡಲಾಗಿದೆ ಎಂಬುವುದು ಸುಳ್ಳು. ಈ ಭೂಮಿ ನೀಡಲು ಕೋರಿ ಆದರ್ಶ್ ಹೌಸಿಂಗ್ ಸೊಸೈಟಿ ಕಾಲಕಾಲಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲೇ ಬಂದಿತ್ತು. ಹೀಗಾಗಿ ಮನವಿಯನ್ನು ಪರಿಶೀಲಿಸುವಂತೆ ಒಬ್ಬ ತಾವು ಷರಾ ಹಾಕಿದ್ದಾಗಿ ತಿಳಿಸಿದ್ದಾರೆ.ವಿಶೇಷ ಆಸಕ್ತಿ ವಹಿಸಿಲ್ಲ ಎಂದಿದ್ದಾರೆ.

ಸೊಸೈಟಿ ಸಲ್ಲಿಸಿದ ಅರ್ಜಿಯಲ್ಲಿ `ಈ ಭೂಮಿ ಸೇನಾ ಆಡಳಿತದ ವಶದಲ್ಲಿದೆ~ ಎಂಬುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ನೂರಾರು ಆಕಾಂಕ್ಷಿಗಳಿರುವಾಗ ಅವರ ಅರ್ಹತೆಯನ್ನು ಪರಿಶೀಲಿಸುವ ಕೆಲಸವನ್ನು ಜಿಲ್ಲಾಧಿಕಾರಿ ಹಂತದಲ್ಲಿ ಮಾಡಬೇಕು. ಇದು ಮುಖ್ಯಮಂತ್ರಿಯ ಕೆಲಸವಲ್ಲ ಎಂದು ವಿಲಾಸರಾವ್ ದೇಶಮುಖ್ ವಾದಿಸಿದ್ದಾರೆ.ಕಾನೂನು ರೀತಿ, ನೀತಿ, ನಿಯಮಗಳಿಗೆ ಅನುಸಾರವಾಗಿಯೇ ಭೂಮಿಯನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.