ನವದೆಹಲಿ (ಪಿಟಿಐ): ಮುಂದಿನ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಈಗಿನ 1.6 ಲಕ್ಷ ರೂಪಾಯಿಗಳಿಂದ 1.8 ಲಕ್ಷ ರೂಪಾಯಿಗಳಿಗೆ (ರೂ.1,80,000 ಅಥವಾ 4000 ಡಾಲರ್) ಏರಿಸುವ ಪ್ರಸ್ತಾವವನ್ನು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮುಂದಿಟ್ಟಿದ್ದಾರೆ.
ಮುಂದಿನ ಹಣಕಾಸು ವರ್ಷಕ್ಕಾಗಿ (2011-12) ಕೇಂದ್ರ ಮುಂಗಡಪತ್ರವನ್ನು ಸಂಸತ್ತಿನಲ್ಲಿ ಮಂಡಿಸುತ್ತಾ ಮುಖರ್ಜಿ ಈ ಪ್ರಸ್ತಾವವನ್ನು ಪ್ರಕಟಿಸಿದರು.
ಏನಿದ್ದರೂ ಕಾರ್ಪೋರೇಟ್ ರಂಗದ ಮೇಲಿನ ಬದಲಿ ತೆರಿಗೆಯನ್ನು ಶೇಕಡಾ 18ರಿಂದ ಶೇಕಡಾ 18.5ಕ್ಕೆ ಏರಿಸಲಾಗಿದೆ. ಸರ್ಚಾರ್ಜನ್ನು ಶೇಕಡಾ 7.5ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ.
80ಕ್ಕೆ ಹೆಚ್ಚು ವಯಸ್ಸಿನ ಅತ್ಯಂತ ಹಿರಿಯ ವೃದ್ಧರಿಗೆ 5 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಮಿತಿಯನ್ನು ಹೆಚ್ಚಿಸುವ ಹೊಸ ಪ್ರಸ್ತಾವವನ್ನು ತಾವು ಮುಂದಿಡುತ್ತಿರುವುದಾಗಿ ಪ್ರಣವ್ ಹೇಳಿದರು. ಹಿರಿಯ ನಾಗರಿಕರ ವಿನಾಯ್ತಿಯ ಅರ್ಹತಾ ವಯೋಮಿತಿಯನ್ನು 65 ವರ್ಷಗಳಿಂದ 60 ವರ್ಷಗಳಿಗೆ ಇಳಿಸಲಾಗುವುದು ಎಂದು ಅವರು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.