ನವದೆಹಲಿ, (ಐಎಎನ್ಎಸ್): ಕಳೆದ ತಿಂಗಳು ಇಲ್ಲಿನ ಇಸ್ರೇಲ್ ರಾಜತಾಂತ್ರಿಕ ಸಿಬ್ಬಂದಿಗೆ ಸೇರಿದ್ದ ಕಾರು ಸ್ಪೋಟಗೊಂಡು ಹಲವರು ಗಾಯಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಹವ್ಯಾಸಿ ಪತ್ರಕರ್ತರೊಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದು, ಅವನನ್ನು ಬುಧವಾರ ದೆಹಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐವತ್ತರ ಆಸುಪಾಸಿನಲ್ಲಿರುವ ಬಂಧಿತ ಮಹಮ್ಮದ ಖಜ್ಮಿ ತಾನೊಬ್ಬ ಹವ್ಯಾಸಿ ಪತ್ರಕರ್ತ ಎಂದು ಹೇಳಿಕೊಂಡಿದ್ದಾನೆ. ಅವನನ್ನು ದಕ್ಷಿಣ ದೆಹಲಿಯಲ್ಲಿ ಮಂಗಳವಾರ ರಾತ್ರಿ ಬಂಧಿಸಲಾಗಿದೆ. ಅವನನ್ನು ಬುಧವಾರ ಮಧ್ಯಾಹ್ನ ತೀಸ್ ಹಜಾರಿ ನ್ಯಾಯಾಲಯಕ್ಕೆ ಹಾಜರಪಡಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳು ಫೆ.13 ರಂದು ಇಸ್ರೇಲ್ ರಾಯಭಾರ ಕಚೇರಿಯ ಹತ್ತಿರ ಇಸ್ರೇಲಿನ ರಾಜತಾಂತ್ರಿಕರೊಬ್ಬರಿಗೆ ಸೇರಿದ್ದ ಕಾರು ಸ್ಫೋಟಗೊಂಡಿತ್ತು. ಅದರಲ್ಲಿ ನಾಲ್ವರು ಗಾಯಗೊಂಡಿದ್ದರು. ಈ ಪ್ರಕರಣವನ್ನು ತಾವು ಬೇಧಿಸಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ.
ಅಂದು ಇಸ್ರೇಲ್ ರಾಜತಾಂತ್ರಿಕ ಸಿಬ್ಬಂದಿಯೊಬ್ಬರ ಕಾರಿನ ಸಮೀಪ ಮೋಟಾರ್ ಸೈಕಲ್ ನಲ್ಲಿ ಬಂದಿದ್ದ ಇಬ್ಬರು, ಕಾರಿಗೆ ಮ್ಯಾಗ್ನೆಟಿಕ್ ಸ್ಫೋಟಕವನ್ನು ಅಂಟಿಸಿ ಪರಾರಿಯಾದ ತಕ್ಷಣ ಸ್ಫೋಟ ಸಂಭವಿಸಿತ್ತು. ಅದರಲ್ಲಿ ಇಸ್ರೇಲ್ ರಾಜತಾಂತ್ರಿಕ ಸಿಬ್ಬಂದಿಯೊಬ್ಬರ ಪತ್ನಿ ತೀವ್ರವಾಗಿ ಗಾಯಗೊಂಡಿದ್ದರೆ, ಇತರ ಮೂವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದವು.
ದಕ್ಷಿಣ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರಾಜತಾಂತ್ರಿಕ ಸಿಬ್ಬಂದಿಯ ಪತ್ನಿ ಇಸ್ರೇಲ್ ಗೆ ಹೋಗಿದ್ದಾರೆ. ಇತರ ಮೂವರನ್ನು ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.