ನವದೆಹಲಿ: ಸಂಸತ್ತಿನ ಪ್ರಸಕ್ತ ಮುಂಗಾರು ಅಧಿವೇಶನದಲ್ಲಿಯೇ ವಿವಾದಾತ್ಮಕ ಲೋಕಪಾಲ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸುವ ಸಂಭವವಿದೆ.
ಮಸೂದೆ ಅಧ್ಯಯನಕ್ಕೆ ಕೇಂದ್ರ ಸರ್ಕಾರ ರಚಿಸಿರುವ ಆಯ್ಕೆ ಸಮಿತಿಯು ತನ್ನ ವರದಿಯನ್ನು ಸೆಪ್ಟೆಂಬರ್ 3ರಂದು ಸಲ್ಲಿಸಲಿದ್ದು, ಮುಂಗಾರು ಅಧಿವೇಶನವು ಸೆ.7ರಂದು ಕೊನೆಗೊಳ್ಳಲಿದೆ.
ಈ ಭ್ರಷ್ಟಾಚಾರ ತಡೆ ಮಸೂದೆಗೆ ಕಳೆದ ವರ್ಷ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು.
ಕಾಂಗ್ರೆಸ್ ಸಂಸದ ಸತ್ಯವ್ರತ ಚತುರ್ವೇದಿ ನೇತೃತ್ವದ ಆಯ್ಕೆ ಸಮಿತಿಯಲ್ಲಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮಸೂದೆಯನ್ನು ಪರಾಮರ್ಶಿಸಿ ಸಲಹೆ ಸೂಚನೆಗಳನ್ನು ನೀಡಿದ್ದರು.
ಆಯ್ಕೆ ಸಮಿತಿಯು ಬಹುಶಃ ಸೆಪ್ಟೆಂಬರ್ 3ರಂದು ತನ್ನ ವರದಿ ನೀಡಲಿದ್ದು, ಮಸೂದೆ ಮಂಡನೆಗೆ ಉತ್ಸುಕವಾಗಿರುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.