ADVERTISEMENT

ಏ 1 ರಿಂದ ಅಣ್ಣಾ ಹಜಾರೆಯಿಂದ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 10:10 IST
Last Updated 5 ಫೆಬ್ರುವರಿ 2011, 10:10 IST

ಅಹ್ಮದನಗರ್, (ಪಿಟಿಐ): ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಅಪರಾಧಿಗಳ- ರಾಜಕಾರಣಿಗಳ-ಅಧಿಕಾರಿಗಳ ನಡುವಿನ ಅನೈತಿಕ ಸಂಬಂಧವನ್ನು ವಿರೋಧಿಸಿ ಬರುವ ಏಪ್ರಿಲ್ 1 ರಿಂದ ತಾವು ಆಮರಣ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ಘೋಷಿಸಿದ್ದಾರೆ.

ಇಲ್ಲಿಗೆ 40 ಕಿ.ಮೀ ದೂರದ ರಾಲೆಗಾಂವ್ ಸಿದ್ಧಿ ಗ್ರಾಮದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಅವರು, ಕುಖ್ಯಾತ ಭೂ, ಮರಳು ಮತ್ತು ತೈಲ ಮಾಫಿಯಾಗಳ ಬಗ್ಗೆ ಹಾಗೂ ಅಪರಾಧಿಗಳ-ರಾಜಕಾರಣಿಗಳ- ಅಧಿಕಾರಿಗಳ ಅನೈತಿಕ ಸಂಬಂಧಗಳ ಬಗ್ಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಈಚೆಗೆ ತೈಲ ಮಾಫಿಯಾದವರಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವಣೆ ಅವರ ಹತ್ಯೆಯಾದ ಘಟನೆಯ  ಹಿನ್ನೆಲೆಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಅವರು, ರಾಜ್ಯದಲ್ಲಿ ಮಾಹಿತಿ ಹಕ್ಕು ಕಾನೂನು ಬಳಸಿ ಭ್ರಷ್ಟಾಚಾರ ತಡೆಯಲು ಮುಂದಾಗುವ ಆಸಕ್ತರ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. 

ADVERTISEMENT

ರಾಜ್ಯದಲ್ಲಿನ ಕಾನೂನಿನ ಇಂಥ ಅರಾಜಕ ಸ್ಥಿತಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಅವರು ಆಪಾದಿಸಿದ್ದಾರೆ.

ಶುಕ್ರವಾರ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ  ಪೃಥ್ವಿರಾಜ್ ಚವಾಣ್ ಅವರಿಗೆ ಪತ್ರ ಬರೆದಿರುವ ಅವರು, ~ಭ್ರಷ್ಟಾಚಾರ ತಡೆಗೆ, ಸಂಘಟಿತ ಅಪರಾಧಗಳ ವಿರುದ್ಧ ದೊಡ್ಡ ದೊಡ್ಡ ಮಾತುಗಳಿಗಿಂತ ನೇರವಾಗಿ ಕ್ರಮ ಕೈಗೊಳ್ಳುವುದು ಮೇಲು~ ಎಂದು ಹೇಳಿದ್ದಾರೆ.

ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವ ಮೊದಲು ಮಾರ್ಚಿ 15 ರಿಂದ ರಾಲೆಗಾಂವ್ ಸಿದ್ಧಿ ಗ್ರಾಮದಲ್ಲಿ ಧರಣಿ ನಡೆಸಲು  ಅಣ್ಣಾ ಹಜಾರೆ ಅವರು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.