ನವದೆಹಲಿ: ಗೋದಾಮುಗಳು ಆಹಾರಧಾನ್ಯಗಳಿಂದ ತುಂಬಿ ತುಳುಕುತ್ತ್ದ್ದಿದು, ಹೊಸದಾಗಿ ಆಹಾರಧಾನ್ಯಗಳನ್ನು ಸಂಗ್ರಹಿಸಲು ಸ್ಥಳಾವಕಾಶ ಮಾಡಿಕೊಡುವ ಉದ್ದೇಶದಿಂದ ಕಡು ಬಡವರಿಗೆ (ಬಿಪಿಎಲ್) ಒಂದು ಕೋಟಿ ಟನ್ಗಳಷ್ಟು ಆಹಾರ ಧಾನ್ಯಗಳನ್ನು ಕೂಡಲೇ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಆಹಾರಕ್ಕೆ ಸಂಬಂಧಿಸಿದ ಸಚಿವರ ತಂಡವು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆ ಸೇರಿ ವಿವಿಧ ರಾಜ್ಯಗಳ `ಬಿಪಿಎಲ್~ ಫಲಾನುಭವಿಗಳಿಗೆ ಆಹಾರಧಾನ್ಯಗಳನ್ನು ವಿತರಿಸಲು ತೀರ್ಮಾನಿಸಿದೆ.
ಹಿಂಗಾರು ಹಂಗಾಮಿನಲ್ಲಿ ಬಂಪರ್ ಉತ್ಪಾದನೆ ಆಗಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಆಹಾರಧಾನ್ಯಗಳು ಗೋದಾಮಿಗೆ ಬರುವ ನಿರೀಕ್ಷೆ ಇದ್ದು, ಅವುಗಳನ್ನು ದಾಸ್ತಾನು ಮಾಡಲು ಸ್ಥಳದ ಕೊರತೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ತುಂಬಿ ತುಳುಕುತ್ತಿರುವ ಆಹಾರಧಾನ್ಯ ಸಂಗ್ರಹವನ್ನು ವಿಲೇವಾರಿ ಮಾಡುವ ಉದ್ದೇಶದಿಂದ `ಬಿಪಿಎಲ್~ ಕುಟುಂಬಗಳಿಗೆ ಹಂಚಲು ನಿರ್ಧರಿಸಲಾಗಿದೆ. ಆದರೆ, ಈಗ ನಿಗದಿಯಾಗಿರುವ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ದೇಶದ ಗೋದಾಮುಗಳ ಪ್ರಸಕ್ತ ಸಂಗ್ರಹ ಸಾಮರ್ಥ್ಯ 63 ದಶಲಕ್ಷ ಟನ್. ಆದರೆ, ಹಿಂಗಾರು ಹಂಗಾಮಿನಲ್ಲಿ 75 ದಶಲಕ್ಷ ಟನ್ ಆಹಾರಧಾನ್ಯ ಸಂಗ್ರಹವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈಗಿರುವ ದಾಸ್ತಾನನ್ನು ಖಾಲಿ ಮಾಡದಿದ್ದರೆ ಹೊಸ ಆಹಾರಧಾನ್ಯಗಳನ್ನು ಮುಕ್ತ ಪ್ರದೇಶದಲ್ಲಿ ಪ್ಲಾಸ್ಟಿಕ್ ಹೊದಿಕೆಗಳನ್ನು ಹೊದಿಸಿ ಸಂಗ್ರಹಿಸಬೇಕಾಗುತ್ತದೆ. ಈ ರೀತಿ ದಾಸ್ತಾನು ಮಾಡುವುದರಿಂದ ಮಳೆ ಗಾಳಿಗೆ ಸಿಲುಕಿ ಆಹಾರಧಾನ್ಯಗಳು ಕೊಳೆತು ಹಾಳಾಗುವ ಸಾಧ್ಯತೆಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.