ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ನ್ಯಾಯಾಲಯ ನವೀನ್ ಜಿಂದಾಲ್, ಮಧುಕೊಡಾ, ಮಾಜಿ ಕೇಂದ್ರ ಸಚಿವ ದಾಸರಿ ನಾರಾಯಣ ರಾವ್ ಸೇರಿದಂತೆ ಏಳು ಜನರಿಗೆ ಜಾಮೀನು ನೀಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಸರಿಯಾಗಿ ಹಾಜರಾಗದ ಇತರ 9 ಆರೋಪಿಗಳಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.
ಕಾಂಗ್ರೆಸ್ನ ನವೀನ್ ಜಿಂದಾಲ್, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೊಡಾ, ಕೇಂದ್ರ ಮಾಜಿ ಸಚಿವ ದಾಸರಿ ನಾರಾಯಣರಾವ್ ಮತ್ತು ಮಾಜಿ ಕಾರ್ಯದರ್ಶಿ ಹರೀಶ್ ಚಂದ್ರ ಗುಪ್ತ ಸೇರಿದಂತೆ ಏಳು ಜನ ಆರೋಪಿಗಳ ಜಾಮೀನು ಅರ್ಜಿ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.
ಆರೋಪಿಗಳು ಕೈಗಾರಿಕೋದ್ಯಮಿಗಳು, ರಾಜಕೀಯ ನಾಯಕರು ಆಗಿರುವುದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ಸರ್ಕಾರದ ಪರ ವಿ.ಕೆ ಶರ್ಮಾ ಅವರು ನ್ಯಾಯಾಧೀಶರಾದ ಭರತ್ ಪರಸಾರ್ ಅವರಲ್ಲಿ ಮನವಿ ಮಾಡಿದರು. ಆದರೆ ಆರೋಪಿಗಳು ವಿಚಾರಣೆಗೆ ಸಹಕರಿಸುತ್ತಿರುವುದರಿಂದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.