ADVERTISEMENT

ಕಾಂಗ್ರೆಸ್ ತೆಕ್ಕೆಗೆ ಮನ್ ಪ್ರೀತ್

ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2016, 19:31 IST
Last Updated 15 ಜನವರಿ 2016, 19:31 IST
ಮನ್‌ಪ್ರೀತ್‌ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವ ಮುನ್ನ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾದರು
ಮನ್‌ಪ್ರೀತ್‌ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವ ಮುನ್ನ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾದರು   

ನವದೆಹಲಿ (ಪಿಟಿಐ): ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರಿಂದ ದೂರವಾಗಿರುವ ಅವರ ತಮ್ಮನ ಮಗ ಮನ್‌ಪ್ರೀತ್‌ ಸಿಂಗ್‌ ಬಾದಲ್‌ ಶುಕ್ರವಾರ ತಮ್ಮ ಪಕ್ಷ ಪೀಪಲ್ಸ್‌ ಪಾರ್ಟಿ ಆಫ್‌ ಪಂಜಾಬ್‌ ಅನ್ನು (ಪಿಪಿಪಿ) ಕಾಂಗ್ರೆಸ್‌ ಜತೆ ವಿಲೀನಗೊಳಿಸಿದರು.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್‌ನ ಬಲ ಇದರಿಂದ ಹೆಚ್ಚಿದೆ.
‘ಮನ್‌ಪ್ರೀತ್‌ ಬಾದಲ್‌ ನೇತೃತ್ವದ ಪಿಪಿಪಿಯು ಕಾಂಗ್ರೆಸ್‌ ಜತೆ ವಿಲೀನಗೊಂಡಿರುವುದು ಸಂತಸ ಉಂಟುಮಾಡಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ವ್ಯವಹಾರಗಳನ್ನು ನೋಡಿಕೊಳ್ಳುವ ಶಕೀಲ್‌ ಅಹ್ಮದ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆಗಿನ ಮಾತುಕತೆ ಬಳಿಕ ಮನ್‌ಪ್ರೀತ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಮನ್‌ಪ್ರೀತ್ 2010 ರಲ್ಲಿ ಪಂಜಾಬ್‌ ಹಣಕಾಸು ಸಚಿವರಾಗಿದ್ದರು.  ಆದರೆ ತಮ್ಮ ದೊಡ್ಡಪ್ಪ ಪ್ರಕಾಶ್‌ ಸಿಂಗ್‌ ಬಾದಲ್‌ ಮತ್ತು ಅವರ ಮಗ, ಉಪಮುಖ್ಯಮಂತ್ರಿ ಸುಖ್‌ಬೀರ್‌ ಸಿಂಗ್ ಬಾದಲ್‌ ಜತೆಗಿನ ಭಿನ್ನಾಭಿಪ್ರಾಯದಿಂದ ಶಿರೋಮಣಿ ಅಕಾಲಿ ದಳದಿಂದ ಹೊರಬಂದಿದ್ದರು.

ಪಂಜಾಬ್‌ ಕಾಂಗ್ರೆಸ್‌ನ ಮುಖ್ಯಸ್ಥ ಅಮರಿಂದರ್ ಸಿಂಗ್‌, ಮಾಜಿ ಮುಖ್ಯಸ್ಥ  ಪ್ರತಾಪ್ ಸಿಂಗ್‌ ಬಾಜ್ವ ಮತ್ತು ಕಾಂಗ್ರೆಸ್‌ ನಾಯಕಿ ಅಂಬಿಕಾ ಸೋನಿ ಅವರು ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

‘ಮನ್‌ಪ್ರೀತ್‌ ನಮ್ಮ ಪಕ್ಷ ಸೇರಿರುವುದು ಸಂತಸದ ವಿಚಾರ. ನಾವು ಚುನಾವಣಾ ಪ್ರಚಾರ ಅಭಿಯಾನವನ್ನು ಸಕಾರಾತ್ಮಕವಾಗಿ ಆರಂಭಿಸಲಿದ್ದೇವೆ. ಇತರ ಪಕ್ಷಗಳ ಜತೆ ಮೈತ್ರಿಯನ್ನು ಎದುರುನೋಡುತ್ತಿದ್ದೇವೆ. ಎಲ್ಲ ಜಾತ್ಯತೀತ ಪಕ್ಷಗಳನ್ನು ಒಂದುಗೂಡಿಸಿ ಅಕಾಲಿ ದಳ ಮತ್ತು ಬಿಜೆಪಿ ವಿರುದ್ಧ ಕಣಕ್ಕಿಳಿಯಲಿದ್ದೇವೆ’ ಎಂದು ಅಮರಿಂದರ್‌ ಸಿಂಗ್‌ ಹೇಳಿದ್ದಾರೆ.

‘ಪಿಪಿಪಿ ಪಕ್ಷದ ನೀತಿಗಳ ಜಾರಿಗೆ ಕಾಂಗ್ರೆಸ್‌ ಸೂಕ್ತ ವೇದಿಕೆಯಾಗಿದೆ’ ಎಂದು ಮನ್‌ಪ್ರೀತ್‌ ತಿಳಿಸಿದ್ದಾರೆ. ‘ಅಕಾಲಿ ದಳದ ನೀತಿಗಳು ನನಗೆ ಒಪ್ಪಿಗೆಯಾಗಿರಲಿಲ್ಲ. ಈ ಕಾರಣ ಹಣಕಾಸು ಸಚಿವನ ಸ್ಥಾನ ತೊರೆದು ಪಕ್ಷದಿಂದ ಹೊರಬಂದಿದ್ದೆ’ ಎಂದಿದ್ದಾರೆ. 

ಅಮರಿಂದರ್‌ ಸಿ.ಎಂ.?: ಅಮರಿಂದರ್‌ ಸಿಂಗ್‌ ಮುಂಬರುವ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಎಂಬುದನ್ನು ಕಾಂಗ್ರೆಸ್‌ ಬಹುತೇಕ ಖಚಿತಪಡಿಸಿದೆ. ‘ಕ್ಯಾಪ್ಟನ್‌ ಅಮರಿಂದರ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಅಭಿಯಾನ ನಡೆಯಲಿದೆ’ ಎಂದು ಪ್ರಚಾರ ಸಮಿತಿಯ ಮುಖ್ಯಸ್ಥೆ ಅಂಬಿಕಾ ಸೋನಿ ತಿಳಿಸಿದ್ದಾರೆ.

ಅಮರಿಂದರ್‌ ಸಿ.ಎಂ ಅಭ್ಯರ್ಥಿ ಹೌದೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿದಾಗ, ‘ಅದನ್ನು ಈಗ ಹೇಳಲು ಸಾಧ್ಯವಿಲ್ಲ. ನೀವೇ ಒಂದು ತೀರ್ಮಾನಕ್ಕೆ ಬನ್ನಿ’ ಎಂದು ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.