ADVERTISEMENT

ಕಾಂಡಾ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST

 ನವದೆಹಲಿ (ಐಎಎನ್‌ಎಸ್): ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣದ ಆರೋಪಿ ತಲೆಮರೆಸಿಕೊಂಡಿರುವ ಹರಿಯಾಣದ ಮಾಜಿ ಸಚಿವ ಗೋಪಾಲ್ ಕಾಂಡಾ ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಪಿ.ಕರುಣಾಕರನ್ ಅವರು ಗುರುವಾರ ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ನಿರೀಕ್ಷಣಾ ಜಾಮೀನು ಕೋರಿ ಕಾಂಡಾ ಗುರುವಾರ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು  ವಜಾ ಮಾಡಿದೆ. `ಗೀತಿಕಾ ಶರ್ಮ ಅತ್ಯಂತ ಸೂಕ್ಷ್ಮ ಸ್ವಭಾವದವರಾಗಿದ್ದು, ಪ್ರೀತಿ ಮತ್ತು ದ್ವೇಷದ ಮನೋಭಾವವುಳ್ಳವರಾಗಿದ್ದರು. ಆತ್ಮಹತ್ಯೆಗೆ ಮುನ್ನ ಬರೆದಿರುವ ಪತ್ರದ ಅಂಶಗಳು ಅಸೂಯೆ, ಪ್ರೀತಿ ಮತ್ತು ದ್ವೇಷದ ಮಿತ್ರ ಭಾವನೆಯನ್ನು ತೋರಿಸುತ್ತವೆ~ ಎಂದು ಕಾಂಡಾ ಪರ ವಕೀಲರು  ಜಾಮೀನು ಅರ್ಜಿಯಲ್ಲಿ ತಿಳಿಸಿದ್ದರು.

ಕಾಂಡಾ ಅವರ ನಿವಾಸ, ಕಚೇರಿಗಳ ಮೇಲೆ ಪೊಲೀಸರು ಗುರುವಾರವೂ ದಾಳಿ ಮುಂದುವರೆಸಿದ್ದು, ದೆಹಲಿ, ಗುಡಗಾಂವ್, ಫರೀದಾಬಾದ್‌ನಲ್ಲಿರುವ ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ ಗುಡಗಾಂವ್‌ನ ಪಾರ್ಕ್ ಫ್ಲಾಜ ಹೋಟೆಲ್ ಮೇಲೂ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಟ್ಟು 35 ಪೊಲೀಸರ ಮೂರು ತಂಡಗಳು ಕಾಂಡಾ ಪತ್ತೆಗೆ ಕಾರ್ಯಾಚರಣೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.