ADVERTISEMENT

ಕಾರ್ತಿ ಚಿದಂಬರಂಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ: ಮಾರ್ಚ್ 7ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಪಿಟಿಐ
Published 1 ಮಾರ್ಚ್ 2018, 14:41 IST
Last Updated 1 ಮಾರ್ಚ್ 2018, 14:41 IST
ಕಾರ್ತಿ ಚಿದಂಬರಂ ಅವರನ್ನು ದೆಹಲಿ ನ್ಯಾಯಾಲಯಕ್ಕೆ ಗುರುವಾರ ಕರೆತರಲಾಯಿತು.
ಕಾರ್ತಿ ಚಿದಂಬರಂ ಅವರನ್ನು ದೆಹಲಿ ನ್ಯಾಯಾಲಯಕ್ಕೆ ಗುರುವಾರ ಕರೆತರಲಾಯಿತು.   

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಬುಧವಾರ ಬಂಧಿಸಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಮಗ ಕಾರ್ತಿ ಅವರಿಗೆ ಜಾಮೀನು ನೀಡುವಂತೆ ಸಿಎ ಎಸ್‌.ಭಾಸ್ಕರರಾಮನ್‌ ಅವರು ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ದೆಹಲಿ ನ್ಯಾಯಾಲಯ ಕಾಯ್ದಿರಿಸಿದೆ.

ಜಾಮೀನು ಅರ್ಜಿ ಸಂಬಂಧ ಆದೇಶವನ್ನು ಮಾರ್ಚ್‌ 7ಕ್ಕೆ ನೀಡಲಾಗುವುದು ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಸುನಿಲ್‌ ರಾಣಾ ಅವರು ಗುರುವಾರ ಹೇಳಿದರು.

ಕಾರ್ತಿ ಅವರನ್ನು ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸುವ ಅಗತ್ಯವಿರಲಿಲ್ಲ ಎಂದು ಎಸ್‌. ಭಾಸ್ಕರರಾಮನ್‌ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಬುಧವಾರ ಲಂಡನ್‌ನಿಂದ ಹಿಂದಿರುಗಿದ ಕಾರ್ತಿ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿಯೇ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅಗತ್ಯ ಪ್ರಕ್ರಿಯೆಗಳ ಬಳಿಕ ಕಾರ್ತಿಯವರನ್ನು ದೆಹಲಿಗೆ ಕರೆದೊಯ್ದು, ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸುಮೀತ್‌ ಆನಂದ್‌ ಅವರ ಮುಂದೆ ಹಾಜರುಪಡಿಸಲಾಯಿತು.

ಕಾರ್ತಿ ತನಿಖೆಗೆ ಸಹಕರಿಸುತ್ತಿಲ್ಲ. ಹಾಗಾಗಿ 15 ದಿನ ಅವರನ್ನು ಕಸ್ಟಡಿಗೆ ನೀಡಬೇಕು ಎಂದು ಸಿಬಿಐ ಕೋರಿತು. ಆದರೆ ಅವರನ್ನು ಒಂದು ದಿನದ ಮಟ್ಟಿಗೆ ಸಿಬಿಐ ವಶಕ್ಕೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.