ADVERTISEMENT

ಕಾಶ್ಮೀರ: ನಾಗರಿಕರನ್ನು ಸೆಳೆಯಲು ಉಗ್ರರಿಂದ ಜಾಲತಾಣಗಳ ಪರಿಣಾಮಕಾರಿ ದುರ್ಬಳಕೆ

ಏಜೆನ್ಸೀಸ್
Published 7 ಜುಲೈ 2017, 11:10 IST
Last Updated 7 ಜುಲೈ 2017, 11:10 IST
ಬುರ್ಹಾನ್ ವಾನಿ (ಸಾಂದರ್ಭಿಕ ಚಿತ್ರ)
ಬುರ್ಹಾನ್ ವಾನಿ (ಸಾಂದರ್ಭಿಕ ಚಿತ್ರ)   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರನ್ನು ಮತ್ತು ನಾಗರಿಕರನ್ನು ಸೆಳೆಯಲು ಉಗ್ರರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ದುರ್ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆದರೆ, ಉಗ್ರರ ಆನ್‌ಲೈನ್ ಸಮರವನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎನ್ನಲಾಗಿದೆ.

ಕಳೆದ ವರ್ಷ ಜುಲೈ 8ರಂದು ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಹತ್ಯೆ ಮಾಡುವುದಕ್ಕೂ ಕೆಲವೇ ದಿನಗಳ ಮುನ್ನ ಆತ ಬಿಡುಗಡೆ ಮಾಡಿದ್ದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೊ ನಾಗರಿಕರನ್ನು ಉಗ್ರರ ಪರ ಸೆಳೆಯುವಂತೆ ಮಾಡಿತ್ತು ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ವಿಡಿಯೊದಲ್ಲೇನಿತ್ತು?: ಬುರ್ಹಾನ್ ವಾನಿ ಆತನ ಸಹಾಯಕನೊಂದಿಗೆ ಬಂದೂಕು ಹಿಡಿದು ನಿಂತಿರುವ ವಿಡಿಯೊ ಅದಾಗಿತ್ತು. ಹಿನ್ನೆಲೆಯಲ್ಲಿ ಆತ ಕಾಶ್ಮೀರಿ ಜನಪದ ಗೀತೆಯನ್ನು ಹಾಡಿರುವುದು ಕೇಳಿಬರುತ್ತಿತ್ತು. ‘ನೀವು ನನ್ನನ್ನು ಮಿಸ್‌ ಮಾಡಿಕೊಳ್ಳಲಿದ್ದೀರಿ, ಓ ತಾಯಿ, ಯಾವಾಗ ನನ್ನನ್ನು ಭುವಿಯಲ್ಲಿ ಮಣ್ಣು ಮಾಡುತ್ತಾರೋ ಆವಾಗ...’ ಎಂಬ ಹೃದಯಸ್ಪರ್ಶಿ ಸಾಲುಗಳು ಆ ಹಾಡಿನಲ್ಲಿ ಅಡಕಗೊಂಡಿದ್ದವು. ಈ ವಿಡಿಯೊದ ಮೂಲಕ ಆತ ಅನೇಕ ಕಾಶ್ಮೀರಿಗರನ್ನು, ಯುವಕರನ್ನು ಸೆಳೆದಿದ್ದ. ವಿಡಿಯೊದಿಂದ ಉಗ್ರರಿಗೆ ನಾಗರಿಕರ ಬೆಂಬಲ ದೊರೆಯುವಂತಾಗಿತ್ತು. ‘ಆ ವಿಡಿಯೊ ನೋಡಿದರೆ ಯಾವನೇ ಕಾಶ್ಮೀರಿ ಅತ್ತುಬಿಡಬಹುದು. ಅದು ನಿಮ್ಮನ್ನು ಸೆಳೆಯುವಂತಿದೆ’ ಎಂದು ಶ್ರೀನಗರದ 40 ವರ್ಷದ ಮಹಿಳೆಯೊಬ್ಬರು ನೀಡಿರುವ ಹೇಳಿಕೆಯನ್ನೂ ಹಿಂದುಸ್ತಾನ್ ಟೈಮ್ಸ್ ಉಲ್ಲೇಖಿಸಿದೆ.

ADVERTISEMENT

ಇದು ಸಾಮಾಜಿಕ ಜಾಲತಾಣವನ್ನು ಉಗ್ರರು ಪರಿಣಾಮಕಾರಿಯಾಗಿ ದುರ್ಬಳಕೆ ಮಾಡುತ್ತಿರುವುದಕ್ಕೆ ಉದಾಹರಣೆ. ಬುರ್ಹಾನ್ ವಾನಿ ಹತ್ಯೆಗೆ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಒಂದು ವಾರದ ಪ್ರತಿಭಟನೆಗೆ ಕರೆ ನೀಡಿರುವ ಉಗ್ರರು ಜನರನ್ನು ಸಂಘಟಿಸಲು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಬಿಜೆಪಿ–ಪಿಡಿಪಿ ಸಮ್ಮಿಶ್ರ ಸರ್ಕಾರ ಕಳೆದ ದಶಕದಲ್ಲಿಯೇ ಏನೇನೂ ಜನಪ್ರಿಯತೆ ಇಲ್ಲದ ಸರ್ಕಾರ. ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ತಲುಪಲು ಈ ಸರ್ಕಾರ ಪ್ರಯತ್ನಿಸಿದರೂ ಅದು ಯಶಸ್ವಿಯಾಗದು’ ಜಮ್ಮು ಮತ್ತು ಕಾಶ್ಮೀರ ನಾಗರಿಕ ಸಮಾಜ ಒಕ್ಕೂಟ (ಜೆಕೆಸಿಸಿಎಸ್) ಚಳವಳಿಗಾರ ಮತ್ತು ವಾಂಡೆ ನಿಯತಕಾಲಿಕೆಯ ಸಂಪಾದಕ ಇರ್ಫಾನ್ ಮೆಹ್ರಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.