ನವದೆಹಲಿ : ‘ಕೇಂದ್ರ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಆಧಾರ್ಕಾರ್ಡ್ ಕಡ್ಡಾಯವಲ್ಲ’ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರಸಿಂಗ್ ತಿಳಿಸಿದ್ದಾರೆ.
ಸ್ಥಾಯಿ ಸಮಿತಿಯ 30ನೇ ಸಭೆಯಲ್ಲಿ ಮಾತನಾಡಿದ ಅವರು, ‘ಪಿಂಚಣಿ ಪಡೆಯಲು ಜೀವಿತಾವಧಿ ಪ್ರಮಾಣಪತ್ರವನ್ನು ಸಲ್ಲಿಸುವ ಸಂಬಂಧ ಬ್ಯಾಂಕ್ಗೆ ಅಲೆಯುವುದನ್ನು ತಪ್ಪಿಸಲು ‘ಆಧಾರ್’ ಹೆಚ್ಚುವರಿಯಾಗಿ ಒದಗಿಸಿರುವ ಸೌಲಭ್ಯವಾಗಿದೆ’ ಎಂದು ತಿಳಿಸಿದರು.
ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡದ ಕಾರಣಕ್ಕಾಗಿ ಕೇಂದ್ರ ಸರ್ಕಾರದ ನಿವೃತ್ತಿ ನೌಕರರು ತಮ್ಮ ಪಿಂಚಣಿ ಪಡೆಯಲು ಕಷ್ಟಪಡುತ್ತಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಪಿಂಚಣಿ ಪಡೆಯಲು ಆಧಾರ್ ಕಡ್ಡಾಯಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿ 48.41 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದು, 61.17 ಲಕ್ಷ ಪಿಂಚಣಿ ಪಡೆಯುವ ನಿವೃತ್ತ ನೌಕರರಿದ್ದಾರೆ.
‘ಕನಿಷ್ಠ ಪಿಂಚಣಿಯನ್ನು ₹9 ಸಾವಿರಕ್ಕೆ ಏರಿಕೆ ಮಾಡಲಾಗಿದ್ದು, ಗ್ರಾಚ್ಯುಯಿಟಿ ಗರಿಷ್ಠ ಮಿತಿಯನ್ನು ₹20 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ. ಅದೇ ರೀತಿ ವೈದ್ಯಕೀಯ ಭತ್ಯೆಯನ್ನು ₹1ಸಾವಿರಕ್ಕೆ ಏರಿಕೆ ಮಾಡಲಾಗಿದೆ’ ಎಂದು ಜಿತೇಂದ್ರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.