ನವದೆಹಲಿ (ಐಎಎನ್ಎಸ್): ಖ್ಯಾತ ಚಲನಚಿತ್ರ ನಿರ್ಮಾಪಕ ಸುಭಾಷ್ ಘಾಯ್ ಅವರಿಗೆ ಚಿತ್ರ ನಗರಿಯನ್ನು ಕಟ್ಟಲು ಮಂಜೂರು ಮಾಡಲಾಗಿದ್ದ 20 ಎಕರೆ ಭೂಮಿಯನ್ನು ಅನೂರ್ಜಿತಗೊಳಿಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಭೂಮಿ ಮಂಜೂರು ಮಾಡಿದ್ದ ಆಗಿನ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಅವರತ್ತಲೂ ಚಾಟಿ ಬೀಸಿದೆ.
ಸದ್ಯ ಕೇಂದ್ರ ಸಚಿವರಾಗಿರುವ ವಿಲಾಸರಾವ್ ದೇಶ್ಮುಖ್ ಅವರು 2004ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ಚಲನಚಿತ್ರ ನಿರ್ದೇಶಕ ಸುಭಾಷ್ ಘಾಯ್ ಅವರಿಗೆ ಚಿತ್ರನಗರಿಯನ್ನು ಕಟ್ಟಲು ಮಂಜೂರು ಮಾಡಿದ್ದ 20 ಎಕರೆ ಭೂಮಿಯನ್ನು ಕಳೆದ ಫೆಬ್ರುವರಿಯಲ್ಲಿ ಬಾಂಬೆ ಹೈಕೋರ್ಟ್ ರದ್ದುಪಡಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಸುಭಾಷ್ ಘಾಯ್ ಅವರು ಸುಪ್ರೀಕೋಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್.ಎಸ್. ದತ್ತು ಹಾಗೂ ಸಿ.ಕೆ. ಪ್ರಸಾದ್ ಅವರಿದ್ದ ನ್ಯಾಯಪೀಠವು ಅರ್ಜಿಯನ್ನು ವಜಾ ಮಾಡಿತಲ್ಲದೆ ಮಂಜೂರು ಮಾಡಿದ್ದ ವಿಲಾಸರಾವ್ ದೇಶಮುಖ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
50 ಕೋಟಿ ರೂಗಳನ್ನು ಈಗಾಗಲೇ ಚಿತ್ರನಗರಿಗಾಗಿ ಹೂಡಿಕೆ ಮಾಡಲಾಗಿದೆ. ಆದುದರಿಂದ ಚಿತ್ರನಗರಿ ಕಟ್ಟಲು ಅವಕಾಶ ಮಾಡಿಕೊಡಬೇಕೆಂದು ಕೋರಿಕೊಂಡ ಘಾಯ್ ಅವರ ಮನವಿಯನ್ನು ನ್ಯಾಯಪೀಠ ಸಾರಾಸಗಟಾಗಿ ತಿರಸ್ಕರಿಸಿತು.
~ನೀವೊಬ್ಬರು ಖ್ಯಾತ ಚಿತ್ರ ನಿರ್ಮಾಪಕರು ಹೌದು. ನಿಮಗಿಂತಲೂ ಅತ್ಯುತ್ತಮ ಚಿತ್ರ ನಿರ್ಮಾಪಕರಿರಲಿಲ್ಲವೆ? ನಿಮಗೇ ಏಕೆ ವಿಶೇಷವಾಗಿ 20 ಎಕರೆ ಭೂಮಿಯನ್ನು ಮಂಜೂರು ಮಾಡಲಾಯಿತು?~ ಎಂದು ನ್ಯಾಯಪೀಠ ಘಾಯ್ ಅವರತ್ತ ಚಾಟಿ ಬೀಸಿತು.
ಅಲ್ಲದೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮುಖ್ಯಮಂತ್ರಿಗಳಿಗೆ ಆಪ್ತರಾದವರಿಗೆ ಭೂಮಿ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ದೇಶಮುಖ್ ಅವರತ್ತಲೂ ಪೀಠ ಕೆಂಡಕಾರಿತು..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.