ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ನೀಡುವಂತೆ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಗುರುವಾರ ಲೋಕಸಭೆಯಲ್ಲಿ ನೋಟಿಸ್ ನೀಡಿತ್ತು. ಇದಕ್ಕೆ ಟಿಡಿಪಿ ಬೆಂಬಲ ಸೂಚಿಸಿತ್ತು. ಆದರೆ ಶುಕ್ರವಾರ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯ ನೋಟಿಸ್ ಪರಿಗಣಿಸಿಲ್ಲ. ಸದನದಲ್ಲಿ ಈ ದಿನದ ಕಲಾಪವೂ ಗದ್ದಲದೊಂದಿಗೆ ಕೊನೆಗೊಂಡಿದೆ. ಗದ್ದಲದ ನಡುವೆ ನೋಟಿಸ್ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ.
ಕಲಾಪ ಆರಂಭವಾದಾಗಲೇ ಬ್ಯಾಂಕ್ ಹಗರಣ ಮತ್ತು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯವನ್ನು ಉಲ್ಲೇಖಿಸಿ ಸದನದಲ್ಲಿ ಗದ್ದಲವುಂಟಾಗಿದೆ. ಟಿಡಿಪಿ, ವೈಎಸ್ಆರ್, ಕಾಂಗ್ರೆಸ್, ಟಿಆರ್ಎಸ್, ಎಐಎಡಿಎಂಕೆ, ಆರ್ಜೆಡಿ ಸದಸ್ಯರು ಸದನದ ಅಂಗಳಕ್ಕಿಳಿದು ಗದ್ದಲವುಂಟು ಮಾಡಿದ್ದಾರೆ. ಎಸ್.ಪಿ ಮತ್ತು ಎಡಪಕ್ಷಗಳೂ ಇದರಲ್ಲಿ ಭಾಗಿಯಾಗಿದ್ದವು.
ಗದ್ದಲ ಜೋರಾಗುತ್ತಿದ್ದಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಮಧ್ಯಾಹ್ನ 12 ಗಂಟೆವರೆಗೆ ಮುಂದೂಡಿದ್ದಾರೆ. ಮಧಾಹ್ನ ನಂತರ ಕಲಾಪ ಆರಂಭವಾದರೂ ಗದ್ದಲ ಮುಂದುವರಿದ ಕಾರಣ ಇಂದಿನ ಕಲಾಪವನ್ನು ಅಂತ್ಯಗೊಳಿಸಲಾಯಿತು.
ವೈಎಸ್ಆರ್ ಕಾಂಗ್ರೆಸ್, ತೆಲುಗುದೇಶಂ ಪಕ್ಷ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ನೀಡಿದ ಅವಿಶ್ವಾಸ ಗೊತ್ತುವಳಿಗೆ ಕಾಂಗ್ರೆಸ್ ಮತ್ತು ಸಿಪಿಎಂ ಬೆಂಬಲ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.