ADVERTISEMENT

ಗೋಧ್ರಾ ಹತ್ಯಾಕಾಂಡಕ್ಕಿಂತ ಕೆಟ್ಟದ್ದು

ಮುಜಫ್ಫರ್‌ನಗರ ಕೋಮುಗಲಭೆಗೆ ಕಾಂಗ್ರೆಸ್‌ ಮುಖಂಡನ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ನವದೆಹಲಿ (ಐಎಎನ್‌ಎಸ್‌): ಮುಜ ಫ್ಫರ್‌ನಗರದ ಕೋಮುಗಲಭೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಮುಖಂಡ ರಶೀದ್ ಅಲ್ವಿ. ‘ಇದು ಗೋಧ್ರಾ ಹತ್ಯಾಕಾಂಡಕ್ಕಿಂತ ಕೆಟ್ಟದ್ದು’ ಎಂದು ಹೇಳಿದ್ದಾರೆ.

‘ಮುಜಫ್ಫರ್‌ನಗರದ ಕೋಮು­ಗಲಭೆಯು 2002ರಲ್ಲಿ ನಡೆದ  ಗೋಧ್ರಾ ಹತ್ಯಾಕಾಂಡಕ್ಕಿಂತ ಕೆಟ್ಟದ್ದು. ಇದಕ್ಕೆ ಉತ್ತರ ಪ್ರದೇಶ ಸರ್ಕಾರವೇ ನೇರ ಹೊಣೆ’ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ರಾಜ್ಯಸಭಾ ಸದಸ್ಯರಾಗಿ ಅಲ್ವಿ ಅವರು, ಪರಿಹಾರ ಶಿಬಿರಕ್ಕೆ ಗುರು­ವಾರ ಭೇಟಿ ಮಾಡಲು ಹೊರಟಾಗ ಪೊಲೀಸರು ಅವರನ್ನು ಲೋನಿ ಗಡಿಯ ಬಳಿ ತಡೆದರು.

‘ನಾನು ಲೋನಿ ಬಳಿಯ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ್ದೆ. ಅಷ್ಟರಲ್ಲೇ ಪೊಲೀಸರು ಅಲ್ಲಿಗೆ ಧಾವಿಸಿ ನನ್ನನ್ನು ಪೊಲೀಸ್‌ ಠಾಣೆಗೆ ಕರೆದೊಯ್ದರು. ಮುಜಫ್ಫರ್‌ನಗರಕ್ಕೆ ಪ್ರವೇಶಿ­ಸದಂತೆ ಅವರಿಗೆ ಲಖನೌನಿಂದ ಆದೇಶ ಸಿಕ್ಕಿದೆ’ ಎಂದು ಹೇಳಿದರು.

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಹತ್ಯಾಕಾಂಡವನ್ನು ನೋಡಿ ಬಂದಿದ್ದ ಅಲ್ವಿ ಅವರ ಪ್ರಕಾರ, ‘ಮುಜಫ್ಫರ್‌ ನಗರದಲ್ಲಿ ಸುಮಾರು 50 ಸಾವಿರ ಜನರು ನಿರಾಶ್ರಿತರಾಗಿದ್ದಾರೆ. ಮತ್ತು 6–7 ಕಡೆ ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದೆ. ಗಲಭೆಯಲ್ಲಿ  ಸರ್ಕಾರದ ಅಂಕಿ ಅಂಶಗಳಿಗಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮೃತಪಟ್ಟ­ವರ ಸಂಖ್ಯೆ 100ರ ಗಡಿ ದಾಟಿದೆ’ ಎಂದು ಹೇಳಿದ್ದಾರೆ.

ಲೋನಿ ಬಳಿಯ ಪರಿಹಾರ ಶಿಬಿರ­ದಲ್ಲಿ ನೆಲೆಸಿರುವ ಸುಮಾರು ಎರಡು ಸಾವಿರ ಜನರು ಅಲ್ವಿ ಅವರ ಬಳಿ ತಮ್ಮ ವ್ಯಥೆ ಹೇಳಿಕೊಂಡರು.

‘ಗಲಭೆಯಲ್ಲಿ ಅನೇಕರನ್ನು ಕೊಲೆ ಮಾಡಿದ್ದರೂ ಇನ್ನೂ ಕೂಡ ಯಾವುದೇ ಪ್ರಕರಣಗಳನ್ನು ದಾಖಲಿಸಿ­ಕೊಂಡಿಲ್ಲ. ನಿರಾಶ್ರಿತ ಶಿಬಿರದಿಂದ ಪೊಲೀಸರು ಸುಮಾರು 73 ಜನರು ತಮ್ಮ ಗ್ರಾಮ­ಗಳಿಗೆ ಹಿಂದಕ್ಕೆ ಕಳುಹಿ­ಸಿದ್ದರು. ಆದರೆ, ಅಲ್ಲಿ ತಮಗೆ ಸುರಕ್ಷತೆ ಇಲ್ಲ ಎಂದು ಶಿಬಿರಕ್ಕೆ ಹಿಂದಕ್ಕೆ ಮರಳಿ­ದ್ದಾರೆ’ ಎಂದು ಅಲ್ವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.