ADVERTISEMENT

ಗೋವಾ ವಾದಕ್ಕೆ ಸಿಗದ ಮನ್ನಣೆ

ಕಳಸಾ ಬಂಡೂರಿ ಯೋಜನೆಯಿಂದ ಕುಡಿಯುವ ನೀರು ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ನವದೆಹಲಿ: ಕಳಸಾ ಬಂಡೂರಿ ಯೋಜನೆಯ ಅನುಷ್ಠಾನದಿಂದ ಕುಡಿಯುವ ನೀರಿಗೆ ಸಮಸ್ಯೆಯುಂಟಾ­ಗುತ್ತದೆ ಎನ್ನುವ ಗೋವಾ ಸರ್ಕಾರದ ಆತಂಕವನ್ನು ಈ ಸಂಬಂಧ ನೇಮಿಸಲಾದ ಮಹದಾಯಿ ಜಲ ವಿವಾದ ನ್ಯಾಯಮಂಡಳಿಯ ಸಲಹೆಗಾರರು ಪುಷ್ಟೀಕರಿಸಿಲ್ಲ.

ಯೋಜನೆಯ ಅಧ್ಯಯನ ನಡೆಸಿದ ನ್ಯಾಯ ಸಲಹೆಗಾರರು ಮಂಡಳಿಗೆ ವರದಿ ಸಲ್ಲಿಸಿದ್ದು, ಗೋವಾ ಸರ್ಕಾರದ ಆಕ್ಷೇಪಕ್ಕೆ ಯಾವುದೇ ಸಮರ್ಥನೆ ನೀಡಿಲ್ಲ.

ಯೋಜನೆಯಿಂದ ನೀರಿನ ಸಮಸ್ಯೆ ಜತೆಗೆ ಪರಿಸರ ಅಸಮತೋಲನ ಉಂಟಾ­ಗು­ತ್ತದೆ  ಎಂದು ಗೋವಾ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಕಳಸಾ ನದಿ ತಿರುವು ಯೋಜನೆ ಭಾಗ­ವಾಗಿ ಮಹದಾಯಿ ನದಿಯಿಂದ ಮಲ­ಪ್ರಭಾ ನದಿಗೆ ನೀರು ಹಾಯಿಸುವ ಮೂಲಕ ಹುಬ್ಬಳ್ಳಿ–ಧಾರವಾಡ ಅವಳಿ ನಗರ­ಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿ­ಹಾರ ಒದಗಿಸುವ ಯೋಜನೆ ಕರ್ನಾ­ಟಕ ಸರ್ಕಾರದಿಂದ 2006ರಲ್ಲಿ ಆರಂಭಗೊಂಡಿದ್ದು ಇದೀಗ ಪೂರ್ಣಗೊ­ಳ್ಳುವ ಹಂತದಲ್ಲಿದೆ ಎಂದು ಸಲಹೆಗಾ­ರರು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯ­ಮೂರ್ತಿ ಜೆ.ಎಂ. ಪಾಂಚಾಳ ಅವರ ನೇತೃತ್ವದ ಮಹದಾಯಿ ನ್ಯಾಯ­ಮಂಡಳಿ ಸದಸ್ಯರು ಕಳೆದ ಡಿಸೆಂಬರ್‌­ನಲ್ಲಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ್ದು ಈ ಸಂದರ್ಭ ಸಲಹೆಗಾರರೂ ಜತೆಯಲ್ಲಿದ್ದರು.

ಮಂಗಳವಾರ ನ್ಯಾಯಮಂಡಳಿ ಸಭೆ ಸೇರಿದ್ದು ಮುಂದಿನ ಸಭೆ ಏ.1ಕ್ಕೆ ನಡೆಯ­ಲಿದೆ. ಕಳಸಾ ಬಂಡೂರಿ ನದಿ ತಿರುವು ಯೋಜನೆ ವಿರುದ್ಧ ಗೋವಾ ಸರ್ಕಾರ ಸಲ್ಲಿಸಿ­ರುವ ಅರ್ಜಿಯನ್ನು ಮಂಡಳಿ ಈ ಸಂದರ್ಭ ವಿಚಾರಣೆಗೆ ತೆಗೆದುಕೊಳ್ಳಲಿದೆ. ಬೇಡ್ತಿ ನದಿ ಮತ್ತಿತರ ಪರ್ಯಾಯ ಮೂಲಗಳಿಂದ ಕರ್ನಾಟಕ ನೀರು ಪಡೆಯಬಹುದಾಗಿದೆ ಎಂದು ಗೋವಾ ವಾದಿಸುತ್ತಿದೆ.

ಕರ್ನಾಟಕ ಸರ್ಕಾರದ ಪರವಾಗಿ ಹಾಜ­ರಾದ ಹಿರಿಯ ವಕೀಲ ಎಫ್‌.­ಎಸ್‌.­ನಾರಿಮನ್‌, ಯೋಜನೆ ಸಂಬಂಧ ಗೋವಾ ಸರ್ಕಾರದ ವಾದವನ್ನು ತೀವ್ರವಾಗಿ ಆಕ್ಷೇಪಿಸಿದರು. ಬೇಡ್ತಿ ಯೋಜನೆಯಿಂದ ಕರ್ನಾಟಕ ನೀರು ಪಡೆಯಬಹುದಾಗಿದೆ ಎನ್ನುವ ಗೋವಾ ಸರ್ಕಾರದ ವಾದ ನ್ಯಾಯ­ಮಂಡಳಿ ವಿಚಾರಣೆ ವ್ಯಾಪ್ತಿಗೆ ಒಳಪಡು­ವು­ದಿಲ್ಲ ಎಂದು ನಾರಿಮನ್‌ ವಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.