ADVERTISEMENT

ಚಲಿಸುತ್ತಿದ್ದ ರೈಲಿನಿಂದ ಹೆಣ್ಣು ಮಕ್ಕಳನ್ನು ಹೊರಗೆಸೆದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST

ಲಖನೌ:  ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಚಿಕ್ಕ ವಯಸ್ಸಿನ ತನ್ನ ಮೂವರು ಹೆಣ್ಣು ಮಕ್ಕಳನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆಸೆದಿ
ದ್ದಾನೆ. 6 ವರ್ಷದ ಬಾಲಕಿ ಮೃತಪಟ್ಟಿದ್ದು, ಸುಮಾರು 5 ಹಾಗೂ 8 ವರ್ಷದ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಮೃತ್‌ಸರ ಹಾಗೂ ಬಿಹಾರದ ಸಹರ್ಸಾ ಮಧ್ಯೆ ಸಂಚರಿಸುವ ಜನಸೇವಾ ಎಕ್ಸ್‌ಪ್ರೆಸ್‌ ರೈಲು ರಾಮ್‌ಕೋಟ್‌ ರೈಲು ನಿಲ್ದಾಣದ ಮೂಲಕ ಹಾದು ಹೋಗುವಾಗ, ಬಿಹಾರದ ನಿವಾಸಿಯಾದ ಇದ್ದು ಎಂಬ ವ್ಯಕ್ತಿ ಒಬ್ಬರ ನಂತರ ಒಬ್ಬರಂತೆ ಮಕ್ಕಳನ್ನು ಕೆಳಗೆ ಎಸೆದಿದ್ದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಮೃತ ಬಾಲಕಿ ಮುನಿಯಾಳ ಶವ ಹಳಿಗಳ ಬಳಿ ಪತ್ತೆಯಾಗಿದೆ. ಗಾಯಗೊಂಡಿರುವ ಅಲ್ಬತುನ್‌ ಖಾತೂನ್‌ ಹಾಗೂ ಸಲೀನ ಖಾತೂನ್‌ ಅವರು ತಂದೆ ಮಾಡಿದ ಕೃತ್ಯವನ್ನು ಪೊಲೀಸರಿಗೆ ವಿವರಿಸಿದ್ದಾರೆ. ಆ ಸಮಯದಲ್ಲಿ ತಮ್ಮ ತಾಯಿಯೊಂದಿಗೆ ತಂದೆ ಜಗಳವಾಡಿದ್ದಾಗಿ ಬಾಲಕಿಯರು ತಿಳಿಸಿದ್ದಾರೆ.

ADVERTISEMENT

‘ರೈಲಿನಲ್ಲಿ ಇವರ ಜೊತೆ ಇದ್ದುನ ಸಹೋದರ ಇಕ್ಬಾಲ್‌ ಕೂಡ ಇದ್ದು, ಆತನೂ ಕೃತ್ಯದಲ್ಲಿ ನೆರವಾಗಿದ್ದಾನೆ. ಇದರ ಹಿಂದಿನ ನೈಜ ಕಾರಣ ತಿಳಿದು
ಬಂದಿಲ್ಲ. ಆದರೆ, ಹೆಣ್ಣು ಮಕ್ಕಳನ್ನು ಹೊರೆ ಎಂದು ಭಾವಿಸಿ ಈ ಕೃತ್ಯ ಎಸಗಿರಬಹುದು’ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ತೀವ್ರ ಆಘಾತಗೊಂಡಿರುವ ಬಾಲಕಿಯರು, ಮನೆಗೆ ಮರಳಲು ನಿರಾಕರಿಸುತ್ತಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು, ಇದ್ದು ಹಾಗೂ ಇಕ್ಬಾಲ್‌ಗಾಗಿ ಶೋಧ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.