ADVERTISEMENT

ಚಿದಂಬರಂ- ಒಮರ್ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 18:30 IST
Last Updated 19 ಜನವರಿ 2011, 18:30 IST

ನವದೆಹಲಿ (ಪಿಟಿಐ): ಗಣರಾಜ್ಯೋತ್ಸವದಂದು ಶ್ರೀನಗರದ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜ ಆರೋಹಣ ಕಾರ್ಯಕ್ರಮ ನಡೆಸಲು ಬಿಜೆಪಿಯು ಯೋಜಿಸಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಬುಧವಾರ ನವದೆಹಲಿಯಲ್ಲಿ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಚಿದಂಬರಂ ಅವರೊಂದಿಗೆ 40 ನಿಮಿಷಗಳ ಕಾಲ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಒಮರ್, ಶ್ರೀನಗರಕ್ಕೆ ಏಕತಾ ಯಾತ್ರೆಯನ್ನು ಆಯೋಜಿಸುವ ಮೂಲಕ ಬಿಜೆಪಿಯು ಜಮ್ಮು ಮತ್ತು ಕಾಶ್ಮೀರದಲ್ಲಿರುವ  ಪರಿಸ್ಥಿತಿಯನ್ನು ಕದಡುವಂತಹ ಆತುರದ ನಿರ್ಧಾರ ಕೈಗೊಳ್ಳಲಾರದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ಪರಿಸ್ಥಿತಿ ಎದುರಿಸುವ ಕುರಿತಂತೆ ಒಂದು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದೂ ಹೇಳಿದರು.

ಬಿಜೆಪಿಯು ಆಯೋಜಿಸಿರುವ  ಯಾತ್ರೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಪರಿಸ್ಥಿತಿ ಕುರಿತಂತೆ ಸರ್ಕಾರ ಮಾಡಿರುವ ಪರಾಮರ್ಶೆಯನ್ನು ಗೃಹ ಸಚಿವರಿಗೆ  ತಿಳಿಸಲಾಗಿದೆ ಎಂದು ಒಮರ್ ಹೇಳಿದರು.ಕೋಲ್ಕತ್ತದಲ್ಲಿ ಆರಂಭವಾಗಲಿರುವ ಬಿಜೆಪಿಯ ಏಕತಾ ಯಾತ್ರೆ ಇದೇ 26ರಂದು ಶ್ರೀನಗರದ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಮುಕ್ತಾಯಗೊಳ್ಳಲಿದೆ.

ಹಲವು ಸಂಘಟನೆಗಳು ಬಿಜೆಪಿಯ ಯಾತ್ರೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.ಯಾತ್ರೆ ಕೈಗೊಳ್ಳುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈಗಾಗಲೇ ಬಿಜೆಪಿಗೆ ಮನವಿ ಮಾಡಿದ್ದಾರೆ.ಏತನ್ಮಧ್ಯೆ, ಜಮ್ಮು ಕಾಶ್ಮೀರದಲ್ಲಿರುವ ಸಂಧಾನಕಾರರು ಕೂಡ ನಿರ್ಧಾರವನ್ನು ಇನ್ನೊಮ್ಮೆ ಪರಿಶೀಲಿಸುವಂತೆ ಬಿಜೆಪಿಯನ್ನು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.