ತಿರುವನಂತಪುರಂ: ‘ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಹಾಕಲಾಗಿರುವ ಮುಹಮ್ಮದ್ ಅಲಿ ಜಿನ್ನಾ ಭಾವಚಿತ್ರವನ್ನು ತೆಗೆದು ಹಾಕುವಂತೆ ಪ್ರತಿಭಟಿಸುತ್ತಿರುವ ಬಲಪಂಥೀಯರ ಬೇಡಿಕೆಯ ಹಿಂದಿನ ತರ್ಕವಾದರೂ ಏನು’ ಎಂದು ಜಮಾತ್–ಎ–ಇಸ್ಲಾಮಿ ಹಿಂದ್ ಪ್ರಶ್ನಿಸಿದೆ.
ಜಿನ್ನಾ ಭಾವಚಿತ್ರ ತೆಗೆದು ಹಾಕುವಂತೆ ಬಿಜೆಪಿ ಸಂಸದ ಸತೀಶ್ ಗೌತಮ್ ಅವರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದ ನಂತರ ಪ್ರತಿಭಟನೆ, ಹಿಂಸಾಚಾರ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಎತ್ತಿರುವ ಸಂಘಟನೆಯ ಅಧ್ಯಕ್ಷ ಮೌಲಾನಾ ಸೈಯದ್ ಜಲಾಲುದ್ದೀನ್ ಉಮರಿ, ‘ಈ ವಿಷಯ ಕುರಿತು ವಿವಾದ ಸೃಷ್ಟಿಸುವವರು ಕೋರ್ಟ್ ಮೆಟ್ಟಿಲೇರಲಿ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.
‘ವಿದ್ಯಾರ್ಥಿ ಸಂಘದ ಆಜೀವ ಸದಸ್ಯರ ಭಾವಚಿತ್ರಗಳನ್ನು ಸಂಘದ ಕಚೇರಿಯಲ್ಲಿ ಅಳವಡಿಸುವುದು ವಿಶ್ವವಿದ್ಯಾಲಯದಲ್ಲಿರುವ ರೂಢಿ. ಅದರಂತೆ ಕಳೆದ 80 ವರ್ಷಗಳಿಂದ ಜಿನ್ನಾ ಭಾವಚಿತ್ರವೂ ಅಲ್ಲಿದೆ’ ಎಂದಿದ್ದಾರೆ.
‘ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಜಿನ್ನಾ ವಹಿಸಿದ್ದ ಪಾತ್ರವನ್ನು ಬಿಜೆಪಿಯ ಕೆಲವು ಹಿರಿಯ ಮುಖಂಡರೂ ಒಪ್ಪುತ್ತಾರೆ. ಅಲ್ಲದೇ, ಭಾವಚಿತ್ರ ತೆರವಿಗಾಗಿ ಉಂಟಾಗಿರುವ ವಿವಾದ ಸಣ್ಣ ವಿಷಯ. ಅಗತ್ಯಕ್ಕಿಂತ ಹೆಚ್ಚು ವೈಭವೀಕರಿಸಿ ಪ್ರಚಾರ ನೀಡಲಾಗಿದೆ. ಈ ವಿಷಯವನ್ನು ವಿದ್ಯಾರ್ಥಿ ಮುಖಂಡರೊಂದಿಗೆ ಮಾತುಕತೆ ನಡೆಸುವ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದೂ ಉಮರಿ ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.