ADVERTISEMENT

ಜುಂದಾಲ್ ವಿರುದ್ಧ ಶೀಘ್ರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಮುಂಬೈ (ಪಿಟಿಐ): 26/11ರ ಮುಂಬೈ ದಾಳಿಗೆ ಸಂಬಂಧಿಸಿದಂತೆ ಮಂಬೈ ಪೊಲೀಸರು ಪೂರಕ ದೋಷಾರೋಪ ಪಟ್ಟಿ ಸಲ್ಲಿಸಲಿದ್ದು, ಲಷ್ಕರ್-ಎ-ತೊಯ್ಬಾ ಸಂಘಟನೆಯ ಭಯೋತ್ಪಾದಕ ಸಯೀದ್ ಜಬಿಉದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ದಾಳಿಯ ಪ್ರಮುಖ ಸಂಚುಕೋರ ಎಂದು ನಮೂದಿಸಲು ಸಿದ್ಧತೆಗಳು ನಡೆದಿವೆ.

ಇನ್ನು 15 ದಿನಗಳಲ್ಲಿ ಸಲ್ಲಿಸಲಾಗುವ ದೋಷಾರೋಪ ಪಟ್ಟಿಯಲ್ಲಿ ಹಿಂದಿ ಭಾಷೆಯಲ್ಲಿ ಮೊದಲ ವರ್ಷದ ಎಂ.ಎ. ಮುಗಿಸಿರುವ ಜುಂದಾಲ್‌ಗೆ  ಪಾಕಿಸ್ತಾನದ 10 ಮಂದಿ ಭಯೋತ್ಪಾದಕರಿಗೆ ಹಿಂದಿ ಕಲಿಸುವ ಜವಾಬ್ದಾರಿ ವಹಿಸಲಾಗಿತ್ತು ಎಂಬ ವಿವರಗಳನ್ನು ಸೇರಿಸಲಾಗುತ್ತದೆ ಎಂದು ಅಪರಾಧ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಹಿಂದಿಯಲ್ಲಿ ಸಂವಹನ ನಡೆಸುವುದರಿಂದ ಪೊಲೀಸರ ಗಮನವನ್ನು ಬೇರೆಡೆ ಸೇಳೆಯುವ ಉದ್ದೇಶದಿಂದ ಭಯೋತ್ಪಾದಕರಿಗೆ ಹಿಂದಿ ಕಲಿಸಲಾಗಿತ್ತು. ಬಿಗಿ ಭದ್ರತೆಯ ಆರ್ಥರ್ ರಸ್ತೆ ಜೈಲಿನಲ್ಲಿರುವ ಅಜ್ಮಲ್ ಕಸಾಬ್ ಮತ್ತು ಜುಂದಾಲ್ ಮುಖಾಮುಖಿಯಾದಾಗ ನಡೆದ ಸಂಭಾಷಣೆಯ ವಿವರಗಳನ್ನು ಮತ್ತು ಮುಂಬೈ ದಾಳಿಯಲ್ಲಿ ಲಷ್ಕರ್- ಎ-ತೊಯ್ಬಾ ಸಂಘಟನೆಯ ಪಾತ್ರದ ಸಂಪೂರ್ಣ ವಿವರಗಳನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

ಈ ದೋಷಾರೋಪ ಪಟ್ಟಿಯನ್ನು  ಈ ತಿಂಗಳ 20ರ ಒಳಗೆ ಸಲ್ಲಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ ದಾಳಿಯ ಸಂದರ್ಭದಲ್ಲಿ ಜುಂದಾಲ್ ಕರಾಚಿಯ ನಿಯಂತ್ರಣ ಕಚೇರಿಯಿಂದ ಮುಂಬೈನ ನಾರಿಮನ್ ಹೌಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಇಬ್ಬರು ಭಯೋತ್ಪಾದಕರಿಗೆ ನೀಡಿರುವ ಸೂಚನೆಗಳನ್ನು ಗುಪ್ತಚರ ಇಲಾಖೆ ಧ್ವನಿ ಮುದ್ರಿಸಿಕೊಂಡಿದ್ದು, ಜುಂದಾಲ್‌ನ ಧ್ವನಿಯ ಖಚಿತತೆಯ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಧ್ವನಿ ಮುದ್ರಣದ ಪ್ರತಿಯನ್ನು ಕಳುಹಿಸಲಾಗಿದೆ.

ಅಲ್ಲಿಂದ ವರದಿ ಬರುವುದನ್ನು ಕಾಯಲಾಗುತ್ತ್ದ್ದಿದು, ಆ ವಿವರಗಳನ್ನೂ ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.