ನವದೆಹಲಿ: ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ ಅವರಿಗೆ ಹಣ ದುರುಪಯೋಗ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನು ಅವಧಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಸ್ತರಿಸಿದೆ. ಮೇ 31ರವರೆಗೆ ಈ ಇಬ್ಬರನ್ನೂ ಬಂಧಿಸದಂತೆ ಸೂಚನೆ ನೀಡಿದೆ.
ತೀಸ್ತಾ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರಿದ್ದ ಪೀಠವು, ಗುಜರಾತ್ ಸಕ್ಷಮ ಪ್ರಾಧಿಕಾರದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವಂತೆ ಅರ್ಜಿದಾರರಿಗೆ ತಿಳಿಸಿತು. ಆದ್ಯತೆ ಮೇಲೆ ಈ ಪ್ರಕರಣದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿತು.
ಏಪ್ರಿಲ್ 5ರಂದು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್, ಮೇ 2ರವರೆಗೆ ಇಬ್ಬರನ್ನೂ ಬಂಧಿಸದಂತೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
2002ರ ಗುಜರಾತ್ ಗಲಭೆಯ ಸಂತ್ರಸ್ತರಿಗೆ ನೆರವು ನೀಡಲು ತೀಸ್ತಾ ಮತ್ತು ಆನಂದ್ ನೇತೃತ್ವದ ‘ಸಬರಂಗ್’ ಎಂಬ ಸರ್ಕಾರೇತರ ಸಂಸ್ಥೆ, ಕೇಂದ್ರ ಸರ್ಕಾರದಿಂದ ₹1.4 ಕೋಟಿ ಅನುದಾನ ಪಡೆದಿತ್ತು. 2008ರಿಂದ 2013ರ ಅವಧಿಯಲ್ಲಿ ಈ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪವನ್ನು ಇಬ್ಬರೂ ಎದುರಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.