ನವದೆಹಲಿ (ಪಿಟಿಐ): ತೆಲಂಗಾಣ ರಚನೆಗೆ ಸಂಸತ್ ಅಂಗೀಕರಿಸಿದ ‘ಆಂಧ್ರಪ್ರದೇಶ ಪುನರ್ರಚನೆ ಮಸೂದೆ’ ಮತ್ತು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸುವ ಕೇಂದ್ರ ಸಚಿವ ಸಂಪುಟದ ಶಿಫಾರಸಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶನಿವಾರ ಅಂಕಿತ ಹಾಕಿದ್ದಾರೆ.
ಈ ಮೂಲಕ ದೇಶದ 29ನೇ ರಾಜ್ಯವಾಗಿ ತೆಲಂಗಾಣ ಅಧಿಕೃತವಾಗಿ ಉದಯವಾಗಿದೆ. 15ನೇ ಲೋಕಸಭೆಯ ಕಡೆಯ ಅಧಿವೇಶನದಲ್ಲಿ ಕೋಲಾಹಲಕ್ಕೆ ಕಾರಣವಾಗಿ ಗದ್ದಲ, ರಂಪಾಟದ ಮಧ್ಯೆಯೇ ಈ ಮಸೂದೆಗೆ ಅಂಗೀಕಾರ ದೊರಕಿತ್ತು.
ಅಖಂಡ ಆಂಧ್ರವನ್ನು ಸೀಮಾಂಧ್ರ (ಕರಾವಳಿ ಮತ್ತು ರಾಯಲಸೀಮೆ) ಮತ್ತು ತೆಲಂಗಾಣ ಎಂದು ವಿಭಜಿಸಿ ಸೀಮಾಂಧ್ರ ಭಾಗಕ್ಕೆ 13 ಜಿಲ್ಲೆಗಳು, ತೆಲಂಗಾಣಕ್ಕೆ ಹೈದರಾಬಾದ್ ನಗರವೂ ಸೇರಿ 10 ಜಿಲ್ಲೆಗಳನ್ನು ಸೇರಿಸಲಾಗಿದೆ.
ಆಂಧ್ರ ಇಬ್ಭಾಗದಿಂದ ಸಿಟ್ಟಿಗೆದಿರುವ ಸೀಮಾಂಧ್ರದ ಜನರನ್ನು ಸಮಾಧಾನ ಪಡಿಸಲು ಕೇಂದ್ರ ಸರ್ಕಾರ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಘೋಷಣೆ ಮಾಡಿದೆ. ಜೊತೆಗೆ ಈ ಎರಡೂ ರಾಜ್ಯಗಳ ಅಭಿವೃದ್ಧಿಗೆ ಆರು ಅಂಶಗಳ ಯೋಜನೆಯನ್ನು ಘೋಷಿಸಿದೆ.
ತೆಲಂಗಾಣ ರಚನೆ ವಿರೋಧಿಸಿ ಆಂಧ್ರಪ್ರದೇಶಚ ಮುಖ್ಯಮಂತ್ರಿ ಕಿರಣ್ ಕುಮಾರ್ ಅವರ ಸರ್ಕಾರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸಲು ಶುಕ್ರವಾರ ಮಾಡಿದ್ದ ಶಿಫಾರಸಿಗೂ ರಾಷ್ಟ್ರಪತಿ ಶನಿವಾರ ಸಹಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.