ADVERTISEMENT

ತೆಲಂಗಾಣ ರಚನೆ: 20 ದಿನಗಳಲ್ಲಿ ಕೇಂದ್ರ ಸಂಪುಟ ನಿರ್ಣಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 10:57 IST
Last Updated 2 ಸೆಪ್ಟೆಂಬರ್ 2013, 10:57 IST

ನವದೆಹಲಿ (ಪಿಟಿಐ): ತೆಲಂಗಾಣ ರಾಜ್ಯ ರಚನೆ ಸಂಬಂಧ ಇನ್ನು 20 ದಿನಗಳಲ್ಲಿ ಸಂಪುಟ ನಿರ್ಣಯ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸೋಮವಾರ ತಿಳಿಸಿದ್ದಾರೆ.

ಸಂಸತ್ತಿನಲ್ಲಿ ತೆಲಂಗಾಣ ರಚನೆಯ ನಿರ್ಣಯ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೂ ಮೊದಲು ರಾಜ್ಯ ರಚನೆಯ ಪ್ರಸ್ತಾವನೆಯನ್ನು ಕಾನೂನು ಇಲಾಖೆಗೆ ಕಳುಹಿಸಿ ಅಲ್ಲಿಂದ ಅಭಿಪ್ರಾಯ ಬಂದ ಬಳಿಕ ನಿರ್ಣಯ ಮಂಡಿಸಲಾಗುವುದು ಎಂದು ಶಿಂಧೆ ವಿವರಿಸಿದರು.

ತೆಲಂಗಾಣ ರಚನೆಗೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಪಡೆದು ಈ ನಿರ್ಣಯವನ್ನು ಆಂಧ್ರಪ್ರದೇಶದ ವಿಧಾನ ಸಭೆಗೆ ಕಳುಹಿಸಿಕೊಡಲಾಗುವುದು. ಅಲ್ಲಿ ಈ ನಿರ್ಣಯ ಅಂಗೀಕಾರಗೊಂಡರೆ ತೆಲಂಗಾಣ ರಾಜ್ಯ ರಚನೆಯಾಗಲಿದೆ ಎಂದು ಶಿಂಧೆ ತಿಳಿಸಿದರು.

ತೆಲಂಗಾಣ ವಿಷಯ ಲೋಕಸಭೆಯ ಕಲಾಪವನ್ನು ಹಾಳುಮಾಡುತ್ತಿರುವುದು ಖೇದಕರ ಎಂದು ಶಿಂಧೆ ವಿಷಾದ ವ್ಯಕ್ತಪಡಿಸಿದರು. ಇನ್ನಿತರ ವಿಷಯಗಳ ಚರ್ಚೆಗಳು ಕೂಡ ಸದನದಲ್ಲಿ ಸರಿಯಾಗಿ ನಡೆಯುತ್ತಿಲ್ಲ ಎಂದು ಶಿಂಧೆ ಅಸಮಾದಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT