ADVERTISEMENT

ತ್ರಿಶೂರ್ ‘ಪೂರಂ’ಗೆ ಚಾಲನೆ

ಬಿಗಿ ಭದ್ರತೆ ನಡುವೆ ಸಹಸ್ರಾರು ಆನೆಪ್ರೇಮಿಗಳ ಸಮ್ಮುಖದಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 12 ಮೇ 2019, 20:31 IST
Last Updated 12 ಮೇ 2019, 20:31 IST
ತ್ರಿಶೂರ್‌ನಲ್ಲಿ ಭಾನುವಾರದಿಂದ ಆರಂಭವಾದ ‘ಪೂರಂ’ಗೆ ಭಾರಿ ಭದ್ರತೆ ಒದಗಿಸಲಾಗಿತ್ತು –ಪಿಟಿಐ ಚಿತ್ರ
ತ್ರಿಶೂರ್‌ನಲ್ಲಿ ಭಾನುವಾರದಿಂದ ಆರಂಭವಾದ ‘ಪೂರಂ’ಗೆ ಭಾರಿ ಭದ್ರತೆ ಒದಗಿಸಲಾಗಿತ್ತು –ಪಿಟಿಐ ಚಿತ್ರ   

ತಿರುವನಂತಪುರಂ: ಸಹಸ್ರಾರು ಆನೆ ಪ್ರೇಮಿಗಳು ಮತ್ತು ಭಕ್ತರ ಸಮ್ಮುಖದಲ್ಲಿ ಆನೆ ಥೆಚ್ಚಿಕೊಟ್ಟುಕಾವು ರಾಮಚಂದ್ರನ್‌ ನೇತೃತ್ವದಲ್ಲಿ ತ್ರಿಶೂರ್‌ನ ಪೂರಂಗೆ (ಉತ್ಸವ) ಭಾನುವಾರ ಚಾಲನೆ ನೀಡಲಾಯಿತು.

ತ್ರಿಶೂರ್‌ನ ವಡಕ್ಕುನಾಥನ್ ದೇವಾಲಯದ ಆವರಣದಲ್ಲಿ ಸೋಮವಾರ ಈ ಉತ್ಸವ ಇನ್ನಷ್ಟು ಕಳೆಗಟ್ಟುತ್ತದೆ. ಈ ವೇಳೆ ನೂರು ಆನೆಗಳು ಇದರಲ್ಲಿ ಭಾಗವಹಿಸಲಿದ್ದು ಸಾಂಪ್ರದಾಯಿಕ ಛತ್ರಿಗಳ ವಿನಿಮಯವಾಗಲಿದೆ. ಉತ್ಸವವನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಅಸಂಖ್ಯಾತ ಭಕ್ತರು ಪಾಲ್ಗೊಳ್ಳುವರು.

ಇಲ್ಲಿಯವರೆಗೂ 13 ಜನರನ್ನು ಕೊಂದಿರುವ ಕುಖ್ಯಾತಿಯನ್ನು ಥೆಚ್ಚಿಕೊಟ್ಟುಕಾವು ರಾಮಚಂದ್ರನ್‌ ಹೊಂದಿದೆ. ಆದರೂ ಇದೇ ಆನೆ ಉತ್ಸವದ ನೇತೃತ್ವ ವಹಿಸಿರುವುದು ವಿವಾದಕ್ಕೆ ಕಾರಣವಾಗಿದೆ. ತ್ರಿಶೂರ್‌ ಜಿಲ್ಲಾಡಳಿತ ಈ ಆನೆಯನ್ನು ಉತ್ಸವದಲ್ಲಿ ಬಳಸಲು ಈ ಮೊದಲು ನಿಷೇಧ ಹೇರಿತ್ತು. ಆದರೆ ಆನೆ ಮಾಲೀಕರ ಮತ್ತು ರಾಜಕೀಯ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿ ನೇತೃತ್ವದ ನಿರ್ವಹಣಾ ಸಮಿತಿ ಹಲವು ನಿಬಂಧನೆಗಳನ್ನು ವಿಧಿಸಿ ಅನುಮತಿ ನೀಡಿತ್ತು.

ADVERTISEMENT

ಉತ್ಸವಕ್ಕಾಗಿ ಭಾನುವಾರ ಮುಂಜಾನೆಯಿಂದಲೇ ದೇವಾಲಯದ ಆವರಣದಲ್ಲಿ ಜನ ಜಮಾಯಿಸಿದ್ದರು. ಪೊಲೀಸರು ಬಿಗಿ ಬಂದೋಬಸ್ತ್‌ ಕಲ್ಪಿಸಿ, ಆನೆಯಿಂದ 10 ಮೀಟರ್‌ ದೂರದಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದರು. ಅಲ್ಲದೆ ಜೋರಾಗಿ ಕೂಗಾಡದಂತೆ ಸಾರ್ವಜನಿಕ
ರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪೊಲೀಸರು ಕೈಗೊಂಡಿದ್ದರು.

ಬೆಳಿಗ್ಗೆ 9.45 ಗಂಟೆಗೆ ರಾಮಚಂದ್ರನ್‌ ಅನ್ನು ದೇವಾಲಯದ ಆವರಣಕ್ಕೆ ಲಾರಿಯಲ್ಲಿ ಕರೆತರಲಾಯಿತು. 10.45ರ ವೇಳೆಗೆ ದೇವಾಲಯದ ದಕ್ಷಿಣ ಪ್ರವೇಶದ್ವಾರದ ಮೂಲಕ ಆನೆ ದೇವರ ವಿಗ್ರಹ ಹೊತ್ತು ಹೊರ ಬಂದಿತು. ಈ ದೇವಾಲಯದ ದಕ್ಷಿಣದ ಬಾಗಿಲನ್ನು ವರ್ಷಕ್ಕೆ ಎರಡು ಬಾರಿಮಾತ್ರ (ಪೂರಂ, ಶಿವರಾತ್ರಿ) ತೆರೆಯುವುದು ವಿಶೇಷ. ಸಂಘಟಕರು ರಾಮಚಂದ್ರನ್‌ ಜೊತೆಗೆ ಉತ್ಸವ ಮೂರ್ತಿಯ ಇನ್ನಷ್ಟು ದೂರ ಮೆರವಣಿಗೆ ನಡೆಸಲು ಉತ್ಸುಕತೆ ತೋರಿದರು. ಆದರೆ ಜಿಲ್ಲಾಡಳಿತ ಇದಕ್ಕೆ ಅವಕಾಶ ನಿರಾಕರಿ
ಸಿದ ಕಾರಣ, ಬೇರೆ ಆನೆಯ ನೆರವಿನಿಂದ ಮೆರವಣಿಗೆ ಮುಂದುವರೆಸಲಾಯಿತು.

ರಾಮಚಂದ್ರನ್‌ ಐದು ವರ್ಷಗಳಿಂದ ದೇವಾಲಯದ ಉತ್ಸವದ ಮೆರವಣಿಗೆಯ ನೇತೃತ್ವ ವಹಿಸುತ್ತಿದೆ. ಫೆಬ್ರುವರಿಯಲ್ಲಿ ಈ ಆನೆ ಇಬ್ಬರ
ಸಾವಿಗೆ ಕಾರಣವಾದ ನಂತರ ಜಿಲ್ಲಾಡಳಿತ ಇದರ ಮೇಲೆ ನಿಷೇಧ ಹೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.