ADVERTISEMENT

ತ್ವರಿತ ನೀರಾವರಿ ಯೋಜನೆ ಅನುದಾನ ಏರಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 15:40 IST
Last Updated 20 ಫೆಬ್ರುವರಿ 2011, 15:40 IST

ನವದೆಹಲಿ : ತ್ವರಿತ ನೀರಾವರಿ ಯೋಜನೆಯಡಿ (ಎಐಬಿಪಿ) ಕರ್ನಾಟಕಕ್ಕೆ ನೀಡಲಾಗುತ್ತಿರುವ ಅನುದಾನವನ್ನು 786 ಕೋಟಿಯಿಂದ 1307.5 ಕೋಟಿಗೆ ಹೆಚ್ಚಿಸುವ ಮಹತ್ವದ ತೀರ್ಮಾನವನ್ನು ಯೋಜನಾ ಆಯೋಗ ಕೈಗೊಂಡಿದೆ.

ರಾಜ್ಯದ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಕಳೆದ ನವೆಂಬರ್‌ನಲ್ಲಿ ಮಾಡಿದ್ದ ಮನವಿಗೆ ಯೋಜನಾ ಆಯೋಗ ಸಕಾರಾತ್ಮಕವಾಗಿ ಸ್ಪಂದಿಸಿದೆ. ಎಐಬಿಪಿ ಅನುದಾನ ಹೆಚ್ಚಿಸಿರುವ ಕುರಿತು ಬೊಮ್ಮಾಯಿ ಅವರಿಗೆ ಆಯೋಗದ ಮಿಹಿರ್ ಷಾ ಪತ್ರ ಬರೆದಿದ್ದಾರೆ.

ಹೆಚ್ಚಳವಾಗಿರುವ 528 ಕೋಟಿಯನ್ನು ಭಾರಿ, ಮಧ್ಯಮ ಅಥವಾ ಸಣ್ಣ ಕೈಗಾರಿಕೆಗಳಿಗೆ ಬಳಕೆ ಮಾಡಬಹುದು. ಮುಕ್ತಾಯ ಹಂತದಲ್ಲಿರುವ ಯೋಜನೆಗಳಿಗೆ ಉಪಯೋಗ ಮಾಡಬೇಕೇ ವಿನಾ ಹೊಸ ಯೋಜನೆಗಳಿಗೆ ಬಳಸುವಂತಿಲ್ಲ.

‘ಮೊದಲಿಗೆ ಎಐಬಿಪಿ ಅಡಿ ರಾಜ್ಯದ ಒಟ್ಟು ಅನುದಾನವೇ 500 ಕೋಟಿ. ಈಗ ಹೆಚ್ಚಳವಾಗಿರುವ ಪ್ರಮಾಣ 500 ಕೋಟಿಗೂ ಹೆಚ್ಚು. ಇದು ನಮ್ಮ ನೀರಾವರಿ ಯೋಜನೆಗಳು ತ್ವರಿತವಾಗಿ ಪೂರ್ಣ ಆಗುತ್ತಿದೆ ಎಂಬುದರ ನಿದರ್ಶನ’ ಎಂದು ಬಸವರಾಜ ಬೊಮ್ಮಾಯಿ ಪತ್ರಕರ್ತರಿಗೆ ತಿಳಿಸಿದರು.

ಭೂಸ್ವಾಧೀನ, ಪುನರ್ವಸತಿ, ಪರಿಸರ- ಅರಣ್ಯ ಇಲಾಖೆ ಅನುಮತಿ ಸಮಸ್ಯೆ ಎದುರಿಸುತ್ತಿರುವ  ಯೋಜನೆಗಳಿಗೆ ಅನುದಾನ ಬಳಸಬಾರದು. ವಿತರಣಾ ಕಾಲುವೆ ಆಗಿರದ ಯೋಜನೆಗಳಿಗೂ ವೆಚ್ಚ ಮಾಡಿ ವ್ಯರ್ಥ ಮಾಡಬಾರದು. ಜಲಾಶಯ, ಮುಖ್ಯ ಕಾಲುವೆ ಮತ್ತು ಉಪ ಕಾಲುವೆಗಳು ಹಂತಹಂತವಾಗಿ, ವ್ಯವಸ್ಥಿತವಾಗಿ ಪೂರ್ಣಗೊಂಡು ಲಾಭ ಜನರಿಗೆ ಸಕಾಲಕ್ಕೆ ದೊರೆಯುವಂತಾಗಬೇಕು ಎಂದು ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.