ADVERTISEMENT

ದೆಹಲಿ ಪ್ರವೇಶಿಸಿದ ಮಳೆ

ದೇಶದಾದ್ಯಂತ ಮುಂಗಾರು ಬಿರುಸು

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ನವದೆಹಲಿ (ಪಿಟಿಐ): ದೇಶದಾದ್ಯಂತ ಮುಂಗಾರು ಬಿರುಸುಗೊಂಡಿದ್ದು,  ರಾಜಧಾನಿ ದೆಹಲಿಗೆ ಭಾನುವಾರ ಮಳೆ ಕಾಲಿಟ್ಟಿದೆ.ಜೂನ್ 1ರಂದು ಕೇರಳ ಪ್ರವೇಶಿಸಿದ್ದ ನೈರುತ್ಯ ಮುಂಗಾರು ರಾಷ್ಟ್ರದಾದ್ಯಂತ ತೀವ್ರಗತಿಯಲ್ಲಿ ಪ್ರಗತಿ ಕಂಡಿದ್ದು, ಎಲ್ಲೆಡೆಯು ಉತ್ತಮ ಮಳೆಯಾಗುತ್ತಿದೆ. 
 
ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದು ಬರ ಪೀಡಿತ  ಪ್ರದೇಶಗಳ ಜನರಲ್ಲಿ ಒಂದಷ್ಟು ನೆಮ್ಮದಿ ತಂದಿದೆ.ಅವಧಿ ಮುಂಚಿತವಾಗಿ ದೆಹಲಿಗೆ ಮಳೆ: ಎರಡು ವಾರಗಳ ಮುಂಚಿತವಾಗಿ ಮುಂಗಾರು ದೆಹಲಿಗೆ ಕಾಲಿಟ್ಟಿದೆ. ಸಾಮಾನ್ಯವಾಗಿ ರಾಜಧಾನಿಯಲ್ಲಿ ಜೂನ್ 29ರಂದು ಮಳೆಗಾಲ ಆರಂಭವಾಗುತ್ತದೆ.

ಸಾಮಾನ್ಯವಾಗಿ ಜೂನ್ 15ರ ವೇಳೆಗೆ ನೈರುತ್ಯ ಮುಂಗಾರು ಇಡೀ ರಾಷ್ಟ್ರವನ್ನು ವ್ಯಾಪಿಸುತ್ತದೆ. ಆದರೆ ಈ ವರ್ಷ ಅವಧಿಗೆ ಮುಂಚಿತವಾಗಿ, ಅಂದರೆ ಶುಕ್ರವಾರವೇ ದೇಶದ ಮೂರನೇ ಎರಡು ಭೂಭಾಗದಲ್ಲಿ ಮಳೆಯಾಗಿದೆ.

`ನೈರುತ್ಯ ಮುಂಗಾರು ಮಾರುತವು ಉತ್ತರಾಖಂಡ, ಹಿಮಾಚಲ ಪ್ರದೇಶ, ಕೊಂಕಣ ಮತ್ತು ಗೋವಾ, ಮಧ್ಯ ಪ್ರದೇಶ, ವಿದರ್ಭ ಮತ್ತು ಕೇರಳ ರಾಜ್ಯಗಳಲ್ಲಿ ಬಿರುಸುಗೊಂಡಿದೆ. ಮಧ್ಯಪ್ರದೇಶ, ಪಂಜಾಬ್ ಮತ್ತು ಹರಿಯಾಣದಲ್ಲಿ ಕ್ರಿಯಾಶೀಲವಾಗಿದೆ' ಎಂದು ಭಾರತೀಯ ಹವಾಮಾನ ಇಲಾಖೆ  ನಿರ್ದೇಶಕ ಬ್ರಹ್ಮ ಪ್ರಕಾಶ್ ಯಾದವ್ ಹೇಳಿದ್ದಾರೆ.

ಮುಂದಿನ ಮೂರು ದಿನಗಳಲ್ಲಿ ಲಕ್ಷದೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿ ಸೇರಿದಂತೆ  ಪೂರ್ವ ಕರಾವಳಿಯ ಹಲವು ರಾಜ್ಯಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದೂ ಅವರು ತಿಳಿಸಿದ್ದಾರೆ.ಜುಲೈ ಮತ್ತು ಆಗಸ್ಟ್‌ನಲ್ಲಿ ದೇಶದಾದ್ಯಂತ ವಾಡಿಕೆಯಷ್ಟು ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.